ಹಾವೇರಿಯಲ್ಲಿ ನಡೆದಿದ್ದು ಏನು?

17 06 2008

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತೊಡಗಿಕೊಂಡಿರುವ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಡೆಯದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಕೊಂಚ ವಿಶ್ಲೇಷಣೆ ಅಗತ್ಯ.

ಮೊದಲನೆಯದು ಬದಲಾದ ರಾಜ್ಯ ರಾಜಕಾರಣ. ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೆ ಕಾರಣವಾದ ಘಟನೆಗಳೇ ಇವತ್ತಿನ ದೊಂಬಿ ಪರಿಸ್ಥಿತಿಯಲ್ಲೂ ಮುಂದುವರೆದಿವೆ. ಯಾರಿಗೂ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಹೆಚ್ಚೆಂದರೆ, ಅದು ಕಳೆದ ಚುನಾವಣೆಗಿಂತ ಒಂದ್ಹತ್ತು ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ಮಾತ್ರ ಊಹಿಸಿದ್ದರು. ರಾಷ್ಟ್ರಪತಿ ಆಡಳಿತಕ್ಕೂ ಪೂರ್ವದಲ್ಲಿ, ವಿಶ್ವಾಸಮತ ಸಾಬೀತು ಮಾಡಲು ಕರೆಯಲಾಗಿದ್ದ ಅಧಿವೇಶನದಲ್ಲಿ ದಿಢೀರ್‌ ಮುಖಭಂಗ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪನವರು ಅಸಹಾಯಕ ಸ್ಥಿತಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದುದು ಜನರಲ್ಲಿ ಅನುಕಂಪ ಮೂಡಿಸಿತು. ಊಟಕ್ಕೆ ಮನೆಯವರೆಗೆ ಕರೆದು, ಎಲೆ ಮುಂದೆ ಕೂತವರನ್ನು ಎಬ್ಬಿಸಿ ಕಳಿಸಿದರೆ ನೋಡಿದವರಿಗೆ ಏನನ್ನಿಸುತ್ತದೋ, ಅಂಥದೇ ಭಾವನೆ ಮತದಾರರಲ್ಲಿ ಉಂಟಾಯಿತು.

ಅಧಿಕಾರ ನೀಡಿದ ಜೆಡಿಎಸ್‌
ಹೀಗಾಗಿ ಮತದಾರನ ಒಲವು ಬಿಜೆಪಿ ಕಡೆ ತಿರುಗಿತು. ಇವತ್ತಿನ ದಿನಗಳವರೆಗೂ ಬಹುತೇಕ ಜನರಿಗೆ ಬಿಜೆಪಿ ಎಂದರೆ ಯಡಿಯೂರಪ್ಪ ಎಂಬ ಭಾವನೆಯಿದೆ. ಹೀಗಾಗಿ ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿಗೆ ಲಾಭದಾಯಕವಾಯಿತು. ನಿರೀಕ್ಷೆ ಇರದ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲು ಯಡಿಯೂರಪ್ಪನವರ ಮೇಲೆ ವ್ಯಕ್ತವಾದ ಅನುಕಂಪವೇ ಕಾರಣ.

ಆದರೆ, ಇತರ ರಾಜಕೀಯ ಪಕ್ಷಗಳು ಜನರ ಈ ಮನೋಭಾವನೆಯನ್ನು ಸರಿಯಾಗಿ ಗುರುತಿಸಿರಲಿಲ್ಲ. ಏಕೆಂದರೆ, ಬಿಜೆಪಿಗೆ ಗ್ರಾಮೀಣ ಪ್ರದೇಶದಲ್ಲಿ ಬೇರುಗಳಿಲ್ಲ. ಅದೇನಿದ್ದರೂ ನಗರ ಪ್ರದೇಶದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಪಕ್ಷ ಎಂಬ ಭಾವನೆ ಅವರಲ್ಲಿತ್ತು. ಹೀಗಾಗಿ, ಚುನಾವಣೆಯನ್ನು ಅವು ಆತ್ಮವಿಶ್ವಾಸದಿಂದಲೇ ಎದುರಿಸಿದವು. ರಾಷ್ಟ್ರಪತಿ ಆಡಳಿತಕ್ಕೂ ಮುನ್ನ ವ್ಯಕ್ತವಾಗಿದ್ದ ಅನುಕಂಪ, ನಾಲ್ಕೈದು ತಿಂಗಳಲ್ಲಿ ಕರಗಿರುತ್ತದೆ ಎಂದು ಅವು ಅಂದುಕೊಂಡಿದ್ದವು. ಒಬ್ಬ ಯಡಿಯೂರಪ್ಪನವರಿಗೆ ಅನ್ಯಾಯವಾದರೆ, ಇಡೀ ಪಕ್ಷಕ್ಕೆ ಅದು ಹೇಗೆ ಲಾಭವಾಗುತ್ತದೆ ಎಂಬ ಪ್ರಶ್ನೆ ಅವರಲ್ಲಿತ್ತು.

ಆದರೆ, ಮತದಾರ ಇವರೆಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿಬಿಟ್ಟ. ಯಡಿಯೂರಪ್ಪನವರ ಮೇಲಿನ ಅನುಕಂಪ ಬಿಜೆಪಿ ಬೆಂಬಲಿಸುವಂತೆ ಮಾಡಿತು. ಹಾಗೆ ನೋಡಿದರೆ, ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಗೆಲುವು ಅಪರೂಪದ್ದು. ಏಕೆಂದರೆ, ಸ್ವಂತ ಸಾಮರ್ಥ್ಯದ ಮೇಲೆ ಸರ್ಕಾರ ರಚಿಸಲಾಗದೇ ಹಳೆಯ ಪಕ್ಷ ಕಾಂಗ್ರೆಸ್‌ ಏದುಸಿರು ಬಿಡುತ್ತಿತ್ತು. ತಮಗೆ ಸರಳ ಬಹುಮತ ಬರುವುದಿಲ್ಲ ಎಂದು ಸ್ವತಃ ಜೆಡಿಎಸ್‌ನ ಎಚ್‌.ಡಿ. ದೇವೇಗೌಡರೇ ಬಹಿರಂಗವಾಗಿ ಹೇಳಿಯಾಗಿತ್ತು. ಸಮ್ಮಿಶ್ರ ಸರ್ಕಾರ ಬರುವುದೇ ಖಂಡಿತ ಎಂದು ಅವರೆಲ್ಲ ಭಾವಿಸಿದ್ದರು.

ಇನ್ನೊಂದೆಡೆ, ಬಿಜೆಪಿಯ ತತ್ವ ಮತ್ತು ಸಿದ್ಧಾಂತವನ್ನು ಬೆಂಬಲಿಸದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮತದಾರರು ಬಿಜೆಪಿಗೆ ಮತ ಹಾಕಿರುವುದಿಲ್ಲ. ಹೀಗಿದ್ದರೂ ಬಿಜೆಪಿ ಸರಳ ಬಹುಮತಕ್ಕೆ ೩ ಸ್ಥಾನ ಹತ್ತಿರಕ್ಕೆ ಬಂದಿತು. ಅಂದರೆ, ಗಳಿಸಿದ ೧೧೦ ಸ್ಥಾನಗಳು ಸ್ವಂತ ಶಕ್ತಿಯಿಂದಲೇ. ಧಾರ್ಮಿಕ ಅಲ್ಪಸಂಖ್ಯಾತರ ಮತಗಳಿಲ್ಲದೇ ಬಂದಿವೆ ಎಂದೇ ಲೆಕ್ಕ. ಚುನಾವಣೆಯಲ್ಲಿ ಜಾತಿ ಹಾಗೂ ಅಲ್ಪಸಂಖ್ಯಾತರ ನಿರ್ಣಾಯಕ ಪಾತ್ರ ನೋಡಿದರೆ, ಬಿಜೆಪಿ ಕಳೆದ ಚುನಾವಣೆಗಿಂತ ೩೦ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದು ನಿಜಕ್ಕೂ ಅಪರೂಪ. ಈ ಯಶಸ್ಸಿಗೆ ಮುಖ್ಯ ಕಾರಣಕರ್ತ ಎಂದರೆ ಯಡಿಯೂರಪ್ಪ.

ಏಕೆಂದರೆ, ಬಿಜೆಪಿಯನ್ನು ಮತದಾರ ಗುರುತಿಸಿದ್ದು ಯಡಿಯೂರಪ್ಪನವರ ಮೂಲಕ. ಅವರಿಗಾದ ಅನ್ಯಾಯ ಬಿಜೆಪಿಗಾದ ಅನ್ಯಾಯ ಎಂದೇ ಭಾವಿಸಿದ. ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮಾತ್ರ ಯಡಿಯೂರಪ್ಪನವರಿಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯ ಎಂದು ಭಾವಿಸಿದ. ಆ ಪಕ್ಷ ಅಧಿಕಾರ ಹಿಡಿಯಲು ಇಂಥದೊಂದು ಮನಃಸ್ಥಿತಿ ಸಹಕಾರಿಯಾಯಿತು. ಚುನಾವಣೆಯಲ್ಲಿ ಸಹ ಯಡಿಯೂರಪ್ಪನವರೇ ಪ್ರಮುಖ ಪ್ರಚಾರಕ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ರಂಥ ಪ್ರಮುಖರೇ ಪ್ರಚಾರ ನಡೆಸಿದರೂ ಅವರು ಜನರನ್ನು ಸೆಳೆಯುವಲ್ಲಿ ವಿಫಲರಾದರು. ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರೂ ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಯಡಿಯೂರಪ್ಪನವರು ನಡೆಸಿದ್ದು ಮಾತ್ರ ಸ್ವಂತ ಬಲದ ಚುನಾವಣೆ ಪ್ರಚಾರ.

ಹೈಕಮಾಂಡ್‌ ಬೆಂಬಲ

ಬಿಜೆಪಿ ಹೈಕಮಾಂಡ್‌ ಈ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಿದೆ. ಅದಕ್ಕೆಂದೇ ಯಡಿಯೂರಪ್ಪನವರಿಗೆ ಪೂರ್ಣ ಸ್ವಾತಂತ್ರವನ್ನು ಅದು ನೀಡಿತ್ತು. ಈ ಕಾರಣಕ್ಕಾಗಿಯೇ ಟಿಕೆಟ್‌ ಹಂಚಿಕೆಯಲ್ಲಿ ಯಡಿಯೂರಪ್ಪನವರ ಪ್ರಭಾವ ಎದ್ದು ಕಾಣುತ್ತಿತ್ತು. ಪಕ್ಷ ಅಧಿಕಾರಕ್ಕೆ ಬಂದು, ಸಂಪುಟ ರಚಿಸುವಾಗಲೂ ಯಾರನ್ನು ಆರಿಸಬೇಕೆಂಬ ತೀರ್ಮಾನವನ್ನು ಯಡಿಯೂರಪ್ಪನವರಿಗೇ ಬಿಡಲಾಗಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅವರು. ಸರ್ಕಾರ ನಡೆಸಲು ಯಾರನ್ನು ಆರಿಸಬೇಕೆಂಬುದನ್ನೂ ಅವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್‌ನ ಇಂಗಿತ.

ಟಿಕೆಟ್‌ ಹಂಚಿಕೆಯಲ್ಲಿ ತೋರಿದ ಜಾಣ್ಮೆಯನ್ನೇ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಲ್ಲಿಯೂ ತೋರಿದ್ದಾರೆ. ಪಕ್ಷೇತರರ ಬೆಂಬಲ ಅನಿವಾರ್ಯ ಎಂಬುದನ್ನು ಅರಿತು ಅವರಿಗೆಲ್ಲ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ. ಆದರೆ, ಪ್ರಮುಖ ಖಾತೆಗಳು ಪಕ್ಷದ ಸದಸ್ಯರನ್ನು ಬಿಟ್ಟು ಹೋಗದಂತೆ ನೋಡಿಕೊಂಡಿದ್ದಾರೆ. ಮುಂದೆಂದಾದರೂ ಜೆಡಿಎಸ್‌ ವಿಭಜನೆಯಾಗಿ, ಅದರ ಸದಸ್ಯರು ಬಿಜೆಪಿ ಬೆಂಬಲಿಸುವುದಾದರೂ, ಅವರು ಸಂಪುಟದಲ್ಲಿ ಪ್ರಾತಿನಿಧ್ಯ ಕೇಳದ ರೀತಿ ಒಂದೇ ಸಲಕ್ಕೆ ೨೯ ಜನರನ್ನು ಸಚಿವರನ್ನಾಗಿಸುವ ಮೂಲಕ ಭವಿಷ್ಯದ ಅಪಾಯವನ್ನು ನಿವಾರಿಸಿಕೊಂಡಿದ್ದಾರೆ. ಹಾಗಂತ ತಮ್ಮ ವಿರೋಧಿಗಳನ್ನು ತೃಪ್ತಪಡಿಸಲೂ ಅವರು ಮರೆತಿಲ್ಲ. ಅನಂತ ಕುಮಾರ್‌ ಬಣಕ್ಕೆ ಮೂರು ಸಚಿವ ಸ್ಥಾನ ನೀಡಿದ್ದಾರೆ. ಶೆಟ್ಟರ್‌ ಅವರನ್ನು ಸ್ಪೀಕರ್‌ ಹುದ್ದೆಯಲ್ಲಿ ಕೂರಿಸಿದ್ದಾರೆ. ತಮ್ಮ ವಿರೋಧಿಗಳಾದ ಮುಖ್ಯಮಂತ್ರಿ ಚಂದ್ರು ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುತ್ತಲೂ ವಿರೋಧಿಗಳನ್ನು ಹೊಂದಿರುವ ಹಾಗೂ ಹಗ್ಗದ ನಡಿಗೆಯ ರೀತಿಯಲ್ಲಿಯೇ ಎಲ್ಲರನ್ನೂ ಓಲೈಸಿಕೊಂಡು ಅವಧಿ ಪೂರ್ತಿಗೊಳಿಸುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪನವರ ಈ ಜಾಣ್ಮೆಯಿಂದ ಪ್ರತಿ ಪಕ್ಷಗಳು ಹಾಗೂ ಅವರ ಇತರ ವಿರೋಧಿಗಳು ಕಂಗೆಟ್ಟಿರುವುದು ಸುಳ್ಳಲ್ಲ.

ರಸಗೊಬ್ಬರದ ಹೆಸರಲ್ಲಿ ವಿವಾದ

ಹೀಗಾಗಿ, ಒಂದು ವಾರ ಹಳೆಯದಾದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಸಗೊಬ್ಬರ ಕೊರತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಯಿತು. ಎಲ್ಲರೂ ಬಲ್ಲ ಸರಳ ಸತ್ಯವೇನೆಂದರೆ, ಗೊಬ್ಬರದಂಥ ವಸ್ತುವಿನ ಕೊರತೆ ವಾರ ಅಥವಾ ತಿಂಗಳಲ್ಲಿ ಉಂಟಾಗುವಂಥದ್ದಲ್ಲ. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ, ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನೆಲ್ಲ ನಿಭಾಯಿಸಲೆಂದೇ ಹಲವಾರು ಇಲಾಖೆಗಳಿವೆ.

ಆದರೆ, ಮೂರು ತಿಂಗಳ ಹಿಂದೆ ರಾಜ್ಯದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲವಲ್ಲ? ಆ ಸಮಯದಲ್ಲಿ ಅಧಿಕಾರದಲ್ಲಿದ್ದುದು ರಾಜ್ಯಪಾಲರಾದ ರಾಮೇಶ್ವರ ಠಾಕೂರ್‌. ರಾಷ್ಟ್ರಪತಿಗಳ ಆಡಳಿತದಲ್ಲಿ ರಾಜ್ಯಪಾಲರೇ ಮುಖ್ಯಮಂತ್ರಿ ಇದ್ದಂತೆ. ಹಿರಿಯ ಅಧಿಕಾರಿಗಳು ಸಚಿವರಿದ್ದಂತೆ. ಬರಲಿರುವ ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾದ ಪ್ರಮಾಣದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ತರಿಸುವ ಕೆಲಸವನ್ನು ಅವರೇಕೆ ಮಾಡಲಿಲ್ಲ? ಬೀಜ ಹಾಗೂ ರಸಗೊಬ್ಬರದ ಬೇಡಿಕೆ ಅನಿರೀಕ್ಷಿತವಾಗಿ ಹುಟ್ಟಿದ್ದೇನಲ್ಲ. ಪ್ರತಿ ವರ್ಷ ಇದೇ ಸಮಯದಲ್ಲಿ ತಾನೆ ಬಿತ್ತನೆ ನಡೆಯುವುದು? ಹಾಗಿದ್ದರೂ, ರಾಜ್ಯಪಾಲರು ಇತ್ತ ಗಮನ ಹರಿಸಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲೂ ರೈತರ ಅಸಮಾಧಾನ ಕಾಣಲಿಲ್ಲ. ಆದರೆ, ಯಾವಾಗ ಬಿ.ಎಸ್‌. ಯಡಿಯೂರಪ್ಪನವರು ಹಸಿರು ಶಾಲು ಹೊದ್ದುಕೊಂಡು ರೈತ ಮತ್ತು ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೋ, ಕೆಲವರಲ್ಲಿ ತಳಮಳ ಶುರುವಾಯಿತು. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಗಳ ಜಾಣ್ಮೆ ಕಂಡು ಅದು ಇನ್ನಷ್ಟು ಹೆಚ್ಚಾಯಿತು.

ಹೀಗಾಗಿ, ಧಾರವಾಡ ಹಾಗೂ ಹಾವೇರಿಗಳು ರಸಗೊಬ್ಬರದ ಕಾರಣ ಹೊತ್ತಿ ಉರಿದವು. ರಸಗೊಬ್ಬರ ಕೊರತೆಯ ಅಸಲಿ ಕಾರಣಗಳನ್ನು ವಿವರಿಸುವ ಜವಾಬ್ದಾರಿಯನ್ನು ಜನನಾಯಕರು ನಿರ್ವಹಿಸದೇ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ವರ್ತಿಸಿದರು. ಬಿಜೆಪಿ ಸರ್ಕಾರವೇ ಕೊರತೆಗೆ ಕಾರಣ ಎಂದು ಬಹಿರಂಗವಾಗಿ ದೂರಿ ರೈತರನ್ನು ರೊಚ್ಚಿಗೆಬ್ಬಿಸಿದರು.

ಕೊರತೆಗೆ ಕಾರಣಗಳು

ಆದರೆ, ರಸಗೊಬ್ಬರ ಹಲವಾರು ಕಾರಣಗಳಿವೆ.

ರಸಗೊಬ್ಬರ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬೇಕಾದ ರಂಜಕಾಮ್ಲ (ಫಾಸ್ಫರಿಕ್ ಆಸಿಡ್‌)ದ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅಲ್ಲದೇ, ಖಾಸಗಿ ರಸಗೊಬ್ಬರ ತಯಾರಕರಿಗೆ ನೀಡಬೇಕಾದ ಸಹಾಯಧನ ಮೊತ್ತವನ್ನು ಕಳೆದ ಹತ್ತು ವರ್ಷಗಳಿಂದ ನೀಡಿಲ್ಲ. ಒಂದೆಡೆ ಕಚ್ಚಾ ವಸ್ತುವಿಗೆ ಹೆಚ್ಚಿಸಿದ ತೆರಿಗೆ, ಇನ್ನೊಂದೆಡೆ ಕಳೆದ ಹತ್ತು ವರ್ಷಗಳ ಸಹಾಯಧನ ಬಾರದಿರುವುದು ಖಾಸಗಿ ಉತ್ಪಾದಕರನ್ನು ಕಂಗೆಡಿಸಿತು. ಪರಿಣಾಮ, ರಸಗೊಬ್ಬರ ಉತ್ಪಾದನೆ ಕುಂಠಿತವಾಯಿತು. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಉತ್ಪಾದನೆ ಮೇಲೆ ಹೊಡೆತ ಬಿತ್ತು.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಿದ್ದ ಸಮಯದಲ್ಲಿ, ರಾಜ್ಯಕ್ಕೆ ಬೇಕಾದ ಪ್ರಮಾಣದ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ನಿರೀಕ್ಷಿಸದಿದ್ದ ಶಕ್ತಿಗಳು ರಸಗೊಬ್ಬರ ಕೊರತೆಯನ್ನು ಸಮಸ್ಯೆ ಎಂಬಂತೆ ಬಿಂಬಿಸುತ್ತ ಹೋದವು. ರಾಜ್ಯದ ಇತರೆಡೆ ಕಂಡು ಬರದ ಹಿಂಸಾಚಾರ ಕೇವಲ ಹಾವೇರಿ ಮತ್ತು ಧಾರವಾಡದಲ್ಲಿ ಕಂಡು ಬಂದಿತು. ಕೊರತೆ ಇದೆ ಎಂದೇ ಆಗಿದ್ದರೆ ಅದನ್ನು ತುಂಬಿಕೊಳ್ಳಲು ಹೆಚ್ಚುವರಿ ರಸಗೊಬ್ಬರ ತರಿಸುವುದು ಕಷ್ಟವಾಗಿರಲಿಲ್ಲ. ಆದರೆ, ರಸಗೊಬ್ಬರವನ್ನು ಕೊಡುವುದೇ ಇಲ್ಲ ಎಂಬಂತೆ ಸಮಸ್ಯೆಯನ್ನು ಬಿಂಬಿಸುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಯೋಜನಾಬದ್ಧವಾಗಿ ನಡೆಯಿತು.

ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. ಚುನಾವಣೆ ಸಮಯದಲ್ಲಿ, ತಾವು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಇಡೀ ದೇಶದಲ್ಲಿ ಅಭಿವೃದ್ಧಿಗೆ ಹೆಸರಾದ ರಾಜ್ಯ ಗುಜರಾತ್‌. ಅದರ ಆರ್ಥಿಕ ವೃದ್ಧಿ ದರ ಇತರ ರಾಜ್ಯಗಳನ್ನು ಮೀರಿಸುವಂತಿದೆ. ಇಡೀ ದೇಶದಲ್ಲಿ ಅತ್ಯಧಿಕ ಪ್ರಮಾಣದ ವಿದೇಶಿ ಬಂಡವಾಳವನ್ನು ಆ ರಾಜ್ಯ ಆಕರ್ಷಿಸುತ್ತಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ನಂತರ, ಗುಜರಾತ್‌ನ ಪ್ರಗತಿ ದರ ಏರುಗತಿಯಲ್ಲಿದೆ. ಯಡಿಯೂರಪ್ಪನವರು ಈ ಮಾದರಿಯನ್ನು ಕರ್ನಾಟಕದಲ್ಲಿ ತರುವ ಇಂಗಿತ ವ್ಯಕ್ತಪಡಿಸಿದ್ದರು. ಹೇಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರಿಗೆ ಪಕ್ಷದ ಹೈಕಮಾಂಡ್‌ನಿಂದ ಪೂರ್ಣ ಸ್ವಾತಂತ್ರ ಸಿಕ್ಕಿತ್ತೋ ಅಂಥದೇ ಸ್ವಾತಂತ್ರ ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಿಕ್ಕಿದೆ.

ಇವೆಲ್ಲ ಬೆಳವಣಿಗೆಗಳನ್ನು ಸಹಿಸದ ಕುತಂತ್ರ ಮನೋಭಾವದ ಜನ ಗೊಬ್ಬರದ ಹೆಸರಿನಲ್ಲಿ ಶಾಂತಿ ಕದಡಲು, ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಯತ್ನಿಸಿದರು. ನಿಜವಾದ ಕಾರಣಗಳನ್ನು ಮುಚ್ಚಿಡುವ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿದರು. ಪರಿಣಾಮ, ಮುಗ್ಧ ರೈತ ಬಲಿಯಾದ. ಹತ್ತಾರು ಜನ ಗಾಯಗೊಂಡರು. ಲಕ್ಷಾಂತರ ರೈತರ ಮನಸ್ಸು ಮುರಿಯಿತು.

ಕೀಳು ರಾಜಕೀಯ ಮಾಡುವುದನ್ನು ಬಿಟ್ಟು ನಮ್ಮ ರಾಜಕಾರಣಿಗಳು ಪ್ರಬುದ್ಧತೆ ತೋರಬೇಕಿದೆ. ಅಭಿವೃದ್ಧಿಗಾಗಿ ಆಡಳಿತ ಪಕ್ಷವನ್ನು ಒತ್ತಾಯಿಸಲಿ. ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವುದಕ್ಕಿಂತ, ಜನರಿಗೆ ಅನುಕೂಲಕರವಾಗುವ ನೀತಿಗಳ ಜಾರಿಗೆ ಒತ್ತು ಕೊಡಲಿ. ಇಲ್ಲದಿದ್ದರೆ, ರಾಜಕೀಯ ಎನ್ನುವುದು ಇನ್ನಷ್ಟು ಅಸಹ್ಯಕರ ವಿಷಯ ಅನ್ನಿಸಿಕೊಳ್ಳುತ್ತದೆ.

- ಚಾಮರಾಜ ಸವಡಿ





ನೆನಪು ಚಿಗುರುವ ಸಮಯ

26 05 2008

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!

ಕಾರೊಂದು ನಿಧಾನವಾಗಿ ಹರಿದು ಹೋಯಿತು. ಡಾಂಬರು ರಸ್ತೆ ಕ್ಷಣ ಕಾಲ ಮರೆಯಾಗಿ, ಮಳೆಯ ಪುಟ್ಟ ಪುಟ್ಟ ಹನಿಗಳು ಕಾರಿನ ದೇಹದ ಮೇಲೆ ಪುಟಿಪುಟಿದು ಹೊಳೆದು ಕಂಗೊಳಿಸಿದವು. ವೈಪರ್‌ ಮಾತ್ರ ನಿರ್ಲಕ್ಷ್ಯದಿಂದ ಗಾಜೊರೆಸುತ್ತಿತ್ತು. ಅದು ಸರಿದಾಡಿದ ಕಡೆ ಅಳುವ ಕಾರು, ಧಾರೆಯಾಗಿ ಸುರಿವ ನೀರು.

ಬಾಲ್ಯಕ್ಕೆ ಬಿಸಿಲು ಇರುವುದಿಲ್ಲ. ಕಹಿಯ ನೆನಪೂ ತುಂಬ ಹೊತ್ತು ನಿಲ್ಲುವುದಿಲ್ಲ. ಅಂಥ ಬಿಸಿಲಲ್ಲೇ ಬೇಸಿಗೆ ರಜಾ. ಹಿರಿಯರೆಲ್ಲ ಬೀಸಣಿಕೆಯಿಂದ ಗಾಳಿ ಹಾಕಿಕೊಳ್ಳುತ್ತಾ ಸಗಣಿ ಸಾರಿಸಿದ ಮನೆಯ ನೆಲದ ಮೇಲೆ ಉಸ್ಸೆಂದು ಮಲಗಲು ಯತ್ನಿಸುತ್ತಿದ್ದಾಗ, ಮಕ್ಕಳಾದ ನಾವು ಊರ ಹಳ್ಳ ಸುತ್ತಲು ಹೋಗುತ್ತಿದ್ದೆವು. ಆವಾಗಿನ್ನೂ ಹಳ್ಳ ಒಣಗಿರಲಿಲ್ಲ. ಬಿರು ಬೇಸಿಗೆಯಲ್ಲೂ ತೆಳ್ಳನೆಯ ನೀರು ಅಲ್ಲಲ್ಲಿ ಹರಿಯುತ್ತಿತ್ತು. ಸುತ್ತ ಕಡು ಹಸಿರು ಪಾಚಿ. ಅವೇ ನೀರು ಕುಡಿಯುತ್ತಿದ್ದ ಎಮ್ಮೆಗಳು. ಮುಖ ತೊಳೆಯುವ ದನ ಕಾಯುವ ಹುಡುಗರು. ನೀರು ಚಿಕ್ಕ ಮಡುವಾಗಿ ನಿಂತ ಕಡೆ ಕಪ್ಪು ಬಣ್ಣದ ಕಿರು ಬೆರಳ ಗಾತ್ರದ ಮೀನುಗಳನ್ನು ಹಿಡಿಯುವ ದುಸ್ಸಾಹಸದಲ್ಲಿ ನಾವು. ಅದನ್ನೇ ಹಿರಿಯರಂತೆ ಅಸಮಾಧಾನದ ಬಿರುಗಣ್ಣಿನಿಂದ ದಿಟ್ಟಿಸುವ ಸೂರ್ಯ.

ಕೊಡೆ ಹಿಡಿದಿದ್ದ ಹುಡುಗಿಯೊಬ್ಬಳು ಲಗುಬಗೆಯಿಂದ ಸಾಗಿ ಹೋದಳು. ಮಳೆ ಹನಿಗಳಿಗೆ ಈಗ ಕೊಡೆಯ ಮೇಲೆ ನರ್ತಿಸುವ ಸುಯೋಗ.

ಬಾಲ್ಯದ ನೆನಪಿನ ತುಂಬ ಊರ ಹಳ್ಳ ಹರಿಯುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಕಡುಗಪ್ಪು ನೀರನ್ನು ಚಿಕ್ಕ ನದಿಯಂತೆ ಹರಿಸುವ ಹಳ್ಳ ನನ್ನ ಸುಂದರ ನೆನಪುಗಳಲ್ಲಿ ಒಂದು. ’ಹಳ್ಳ ಬಂತು’ ಎಂಬ ಉದ್ಗಾರ ಇಡೀ ಊರನ್ನು ಹಳ್ಳದ ದಂಡೆಯುದ್ದಕ್ಕೂ ನಿಲ್ಲಿಸುತ್ತಿತ್ತು. ನೂರು ಮೀಟರ್‌ ಉದ್ದಕ್ಕೂ ಭೋರ್ಗರೆದು ಹರಿಯುವ ಹಳ್ಳದಲ್ಲಿ ತೇಲಿ ಹೋಗುವ ಲೆಕ್ಕವಿಲ್ಲದಷ್ಟು ಎಲೆ-ಕಸಕಡ್ಡಿಗಳು, ಹಾವು ಚೇಳುಗಳು. ಅಪರೂಪಕ್ಕೆ ಎಮ್ಮೆ, ಆಡು, ಕುರಿಗಳು. ಹಳ್ಳದ ಇನ್ನೊಂದು ದಿಕ್ಕಿಗೆ, ನೆರೆ ಇಳಿಯುವುದನ್ನೇ ಕಾಯುತ್ತ ನಿಂತ ಕೊಪ್ಪಳ-ಮುಂಡರಗಿ ಖಾಸಗಿ ಬಸ್‌ನ ಪ್ರಯಾಣಿಕರ ದಂಡು. ಕೂಲಿ ಕೆಲಸಕ್ಕೆ ಹೋಗಿ ಹಿಂತಿರುಗುವ ಆಳುಗಳು, ದನ ಕಾಯುವ ಹುಡುಗರು. ಬೆದರಿ ದೂರ ನಿಂತಿರುತ್ತಿದ್ದ ದನಗಳು. ನಾವು ಈ ಕಡೆಯಿಂದ ಕೂಗುತ್ತಿದ್ದೆವು. ಅವರು ಆ ಕಡೆಯಿಂದ ಕೇಕೆ ಹಾಕಿ ಪ್ರತಿಕ್ರಿಯೆ ನೀಡುತ್ತಿದ್ದರು. ನಡುವೆ ನಿರ್ಲಕ್ಷ್ಯದಿಂದ ಹರಿಯುವ ಹಳ್ಳ.

ಬೇಸಿಗೆಯಲ್ಲಿ ಸೊರಗುತ್ತ ಬಸವಳಿಯುವ ಹಳ್ಳದ ದಂಡೆಗಳಲ್ಲಿ ದಟ್ಟವಾಗಿ ಬೆಳೆದ ಜಾಲಿ ಗಿಡಗಳು. ಅವುಗಳ ನೆರಳಲ್ಲಿ, ಒಣ ಉಸುಕಿನ ಮೇಲೆ ಇಸ್ಪೀಟಾಡುವ ಸೋಮಾರಿ ಜನ. ಕದ್ದು ಬೀಡಿ ಸೇದುವ ಪ್ರಾಯದ ಹುಡುಗರು. ಶೇಂದಿ ಕುಡಿವ ಜನರು. ಬಾಲ್ಯದ ಕುತೂಹಲಕ್ಕೆ ಸಾವಿರ ಕಣ್ಗಳು. ಸಾವಿರ ಸಾವಿರ ದೃಶ್ಯಗಳು.

ಸೂರ್ಯ ಕಂದುತ್ತಿದ್ದಂತೆ ಮನೆಗೆ ಓಟ. ಪರೀಕ್ಷೆ ಮುಗಿದಿರುತ್ತಾದ್ದರಿಂದ ಲಾಟೀನದ ಸುತ್ತ ಕೂತು ಓದುವ ಪ್ರಮೇಯ ಇರುತ್ತಿರಲಿಲ್ಲ. ಜೋಳದ ಅಂಬಲಿಗೆ ಮಜ್ಜಿಗೆ ಸಾರು ಉಂಡು, ಹಾಸಿಗೆ ಸಮೇತ ಮಾಳಿಗೆ ಏರಿದರೆ, ಕೈಗೆಟಕುವ ಎತ್ತರದಲ್ಲಿ ಸ್ವಚ್ಛ ನಕ್ಷತ್ರಗಳು. ನನ್ನ ಅತಿ ಸುಂದರ ಶಾಂತ ರಾತ್ರಿಗಳನ್ನು ಹೀಗೆ ಆಕಾಶ ನಿಟ್ಟಿಸುತ್ತ ಕಳೆದಿದ್ದೇನೆ. ಎಳೆಯ ಕಂಗಳ ತುಂಬ ಸಾವಿರಾರು ಭರವಸೆಯ ಚುಕ್ಕಿಗಳು. ವಿದ್ಯುತ್‌ ಇಲ್ಲದ ನೀರವ ರಾತ್ರಿಗಳಲ್ಲಿ, ಮಿನುಗುತ್ತ ಭರವಸೆ ಹುಟ್ಟಿಸುತ್ತಿದ್ದ ದೀಪಗಳವು. ಅಣ್ಣಂದಿರೆಲ್ಲ ಮಲಗಿ, ಊರಿನ ಎಲ್ಲ ಸದ್ದೂ ನಿದ್ದೆ ಹೋದ ನಂತರವೂ ತುಂಬ ಹೊತ್ತು ನಕ್ಷತ್ರಗಳನ್ನೇ ನೋಡುತ್ತ ಎಚ್ಚರವಾಗಿರುತ್ತಿದ್ದೆ. ಯಾವ ಮಾಯದಲ್ಲಿ ಬಂದಿರುತ್ತಿತ್ತೋ ನಿದ್ದೆ. ಕಿವಿಗಳ ಹತ್ತಿರವೇ ಗುಬ್ಬಿಗಳು ಚಿಂವ್‌ಗುಟ್ಟುತ್ತ ಕಾಣದ ಕಾಳುಗಳಿಗಾಗಿ, ಹುಳು ಹುಪ್ಪಟೆಗಳಿಗಾಗಿ ಹುಡುಕಾಡುವಾಗಲೇ ಎಚ್ಚರ. ರಾತ್ರಿಯಲ್ಲಿ ಚೆಂದಗೆ ನಿದ್ದೆ ಮಾಡಿದ್ದ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಅಂಗಳ ಗುಡಿಸುವ, ನೀರು ಚಿಮುಕಿಸುವ ಹೆಂಗಳೆಯರು. ಕೈಯಲ್ಲಿ ಹಿತ್ತಾಳೆ ಚೊಂಬುಗಳನ್ನು ಹಿಡಿದು ಬಹಿರ್ದೆಶೆಗೆ ಹೊರಟ ಗಂಡಸರು. ಗುಡಿಸಿದ ಅಂಗಳಗಳಿಂದ ಏಳುವ ತೆಳ್ಳನೆಯ ದೂಳಿನ ಮೋಡದಿಂದ ಕೆಂಪಾಗಿ ನಗುವ ಸೂರ್ಯ. ನನ್ನ ಕಣ್ತುಂಬ ರಾತ್ರಿ ಕಂಡ ನಕ್ಷತ್ರಗಳ ಚಿತ್ರ.

ಮಳೆ ಬೀಳುತ್ತಲೇ ಇದೆ. ಸದ್ದಿಲ್ಲದೆ, ಸಣ್ಣಗೆ. ಹೊಡೆದು ತುಂಬ ಹೊತ್ತಾದರೂ ಬಿಕ್ಕಳಿಸುತ್ತಲೇ ಇರುವ ಮಗುವಿನಂತೆ.

ಆದರೆ, ನನ್ನೂರಲ್ಲಿ ಈಗ ಹಳ್ಳ ಮಳೆಗಾಲದಲ್ಲೇ ಬತ್ತುತ್ತದೆ. ಹಗಲು ಹೊತ್ತು ಬೀಸಣಿಕೆಗಳು ಕಾಣುವುದಿಲ್ಲ- ಪಂಖಾಗಳು ತಿರುಗುತ್ತವೆ. ಸಗಣಿ ಸಾರಿಸಿದ ನೆಲ ಈಗ ಅಪರೂಪ. ಕಪ್ಪು ಕಡಪಾ ಕಲ್ಲಿನ ಮೇಲೆ ನಿದ್ದೆ ಹೋಗುವ ಜನರಿಗೆ ಕನಸುಗಳು ಬೀಳುವುದೂ ಅನುಮಾನ. ಬಿರು ಬೇಸಿಗೆಯಲ್ಲಿ ಹಳ್ಳ ಸುತ್ತುವ ಮಕ್ಕಳು ಈಗಿಲ್ಲ. ಅವರೆಲ್ಲ ಟಿವಿ ನೋಡುತ್ತಾರೆ. ಸಂಜೆ ವೇಳೆ ಹೊರಹೊರಟರೂ ಅದು ಹಳ್ಳದ ಕಡೆಗಲ್ಲ. ಬ್ಯಾಟ್‌ ಹಿಡಿದು ಶಾಲೆಯ ಮೈದಾನಕ್ಕೆ ನುಗ್ಗುತ್ತಾರೆ. ರಾತ್ರಿ ಲಾಟೀನು ಉರಿಯುವುದಿಲ್ಲ. ಲೈಟ್ ಹಾಕುತ್ತಾರೆ. ಕಡು ಬಡವ ಕೂಡ ಅಂಬಲಿ ಉಣ್ಣುವುದಿಲ್ಲ. ರೇಶನ್‌ದಾದರೂ ಸರಿ, ಅಕ್ಕಿ ಇರುತ್ತದೆ. ಉಂಡು, ಮಾಳಿಗೆ ಏರುವ ಉಮೇದು ಎಷ್ಟು ಜನರಿಗೆ ಉಳಿದಿದೆಯೋ! ಊರ ತುಂಬ ಹರಡಿರುವ ಬೀದಿ ದೀಪಗಳ ಬೆಳಕಿನ ಎದುರು ನಕ್ಷತ್ರಗಳೇಕೋ ಮಂಕು ಮಂಕು.

ನೋವಿನ ಎಳೆಗಳಂತೆ ಮಳೆ ಬೀಳುತ್ತಲೇ ಇದೆ. ಸುಮ್ಮನೇ ನಿಂತ ಇವಳ ಮನಸ್ಸಿನಲ್ಲಿ ತೌರು ಮನೆಯ ಚಿತ್ರ ಮೂಡಿರಬೇಕು. ಜಗತ್ತು ತಿಳಿಯದ ಗೌರಿಯ ಮನಸ್ಸಿನಲ್ಲಿ ಯಾವ ಚಿತ್ರವಿದೆಯೋ. ಅವಳೂ ಮೌನವಾಗಿ ಮಳೆ ದಿಟ್ಟಿಸುತ್ತಿದ್ದಾಳೆ. ಬೆಂಗಳೂರಿನ ರಾತ್ರಿ ದೀಪಗಳ ಪ್ರಭೆಗೆ ಕಡುಕಪ್ಪು ಮೋಡಗಳೂ ಸುಟ್ಟ ಹಪ್ಪಳದಂತೆ ಕಾಣುತ್ತಿವೆ. ಮಳೆಗೆ ಬೆದರಿದವರಂತೆ ಜನ ಮನೆಯೊಳಗೆ ಟಿವಿ ಮುಂದೆ ಕೂತಿದ್ದಾರೆ. ರಸ್ತೆಯನ್ನೆಲ್ಲ ಮಳೆ ಹನಿಗಳ ನೃತ್ಯಕ್ಕೆ ಬಿಟ್ಟುಕೊಟ್ಟಿದ್ದಾರೆ.

ನನ್ನ ಮಗಳು ಬೆಂಗಳೂರಲ್ಲೇ ಬೆಳೆಯುತ್ತಾಳೆ. ಅವಳ ಪಾಲಿಗೆ ಊರಿನ ಹಳ್ಳ ಇಲ್ಲ. ಬಿರು ಬೇಸಿಗೆ ಇಲ್ಲ. ಅಂಬಲಿ-ಮಜ್ಜಿಗೆ ಊಟವಿಲ್ಲ. ಲಾಟೀನಿನ ಬೆಳಕಿಲ್ಲ. ಉಂಡ ಕೂಡಲೇ ಹಾಸಿಗೆ ಹೊತ್ತು ಮಾಳಿಗೆ ಏರುವುದಿಲ್ಲ. ದೊಡ್ಡವಳಾಗಿ ಬುದ್ಧಿ ಬಲಿತ ಮೇಲೆ, ಮಳೆ ಎಂದರೆ ಡಾಂಬರು ರಸ್ತೆಯ ಮೇಲೆ ಹನಿಗಳ ನಾಟ್ಯ ಎಂದು ನೆನಪಿಸಿಕೊಳ್ಳುತ್ತಾಳೇನೋ! ಮಳೆ ಮುಗಿಲು ಎಂದರೆ ಸುಟ್ಟ ಹಪ್ಪಳ ನೆನಪಾಗುವುದೇನೋ! ಗೇಟಿನ ಸರಳುಗಳ ಚೌಕಟ್ಟುಗಳ ಮೂಲಕ, ಹರಿದು ಹೋಗುವ ವಾಹನಗಳ ಮೇಲೆ ಸಿಡಿವ ಹನಿಗಳ ಚಿತ್ರದ ಮೂಲಕ ಮಳೆಯನ್ನು ನೆನಪಿಸಿಕೊಳ್ಳುತ್ತಾಳೇನೋ! ಯಾರು ಬಲ್ಲರು?

ನಿಂತಷ್ಟೂ ನೆನಪುಗಳು ಉಕ್ಕುತ್ತಲೇ ಇವೆ. ಭೋರ್ಗರೆಯುತ್ತಲೇ ಇವೆ. ಅವರವರ ಬಾಲ್ಯದ ದಿನಗಳು ಅವರವರ ಪಾಲಿಗೆ ಸೊಗಸೇ ಅಂದುಕೊಂಡರೂ ವಿಷಾದ ಹೋಗದು. ನೆನಪು ಜಾರದು. ಥೇಟ್ ಮಳೆಯ ಹನಿಗಳಂತೆ ಮತ್ತೆ ಮತ್ತೆ ಅಪ್ಪಳಿಸುತ್ತವೆ. ಥಟ್ಟನೇ ಸಿಡಿದು ಬಣ್ಣವರಳಿಸಿ ಪ್ರತಿಫಲಿಸಿ ಕರಗುತ್ತವೆ. ಮತ್ತೆ ಹನಿ, ಮತ್ತೆ ಪ್ರತಿಫಲನ. ಡಾಂಬರು ರಸ್ತೆ ಯಾವುದನ್ನೂ ಹೀರಿಕೊಳ್ಳುವುದಿಲ್ಲ. ಎಲ್ಲ ಹನಿಗಳನ್ನೂ ಬಳಿದು ಚರಂಡಿಗೆ ಹರಿಸುತ್ತದೆ. ಅಲ್ಲಿಂದ ಅವು ಎಲ್ಲಿಗೆ ಹೋಗುತ್ತವೋ! ಉಕ್ಕಿ ಹರಿಯಬೇಕೆಂದರೂ ಬೆಂಗಳೂರಿನಲ್ಲಿ ಹಳ್ಳವಾದರೂ ಎಲ್ಲಿದೆ?

ದಿಢೀರನೇ ಅಪ್ಪಳಿಸಿದ ಸಿಡಿಲಿಗೆ ಬೆದರಿ ವಿದ್ಯುತ್‌ ಕಣ್ಮುಚ್ಚಿತು. ಎಲ್ಲೆಡೆ ಆವರಿಸಿಕೊಂಡ ಅಂಧಕಾರ. ಈಗ ಮಳೆ ಕಾಣಿಸದು. ಅದರ ನರ್ತನ ಗೋಚರಿಸದು. ಟಾರು ರಸ್ತೆಯೂ ಇಲ್ಲ, ಬೀದಿ ದೀಪಗಳೂ ಇಲ್ಲ. ಮಳೆ ಬೀಳುತ್ತಿದೆ ಎಂಬ ಅರಿವಿನ ಹೊರತಾಗಿ ಏನೆಂದರೆ ಏನೂ ಕಾಣುತ್ತಿಲ್ಲ.

ಮೂವರೂ ಮೌನವಾಗಿ ನಿಂತಿದ್ದೆವು. ಮಳೆ ಬೀಳುವ ಮೆದು ಮರ್ಮರ ಈಗ ಸ್ಪಷ್ಟವಾಗಿ ಕೇಳುತ್ತಿತ್ತು. ಊರಿನ ಬಾನಿನಗಲ ಹರಡಿದ ನಕ್ಷತ್ರಗಳು ನೆನಪಾದವು. ಕಪ್ಪು ಬಾಣಲೆಯಲ್ಲಿ ಅರಳು ಚೆಲ್ಲಿದಂತೆ ಹರಡಿದ ನಕ್ಷತ್ರಗಳು ತುಂಬಿದ ನನ್ನ ಬಾಲ್ಯ ನೆನಪಾಯಿತು. ತಲೆ ಎತ್ತಿ ನೋಡಿದೆ. ಅಳುವ ಕಪ್ಪು ಮೋಡಗಳೇ ಎಲ್ಲೆಡೆ. ಇನ್ನು ನಕ್ಷತ್ರಗಳು ಎಲ್ಲಿಂದ ಬಂದಾವು?

ಮೆಲ್ಲಗೇ ಮಗಳ ಕೈ ಹಿಡಿದುಕೊಂಡೆ. ಆಕೆಯ ಇನ್ನೊಂದು ಕೈಯನ್ನು ರೇಖಾ ಹಿಡಿದುಕೊಂಡಳು. ಮೂವರೂ ಕತ್ತಲಲ್ಲೇ ಮನೆ ಹೊಕ್ಕೆವು. ಇವತ್ತು ರಾತ್ರಿಯಿಡೀ ಮಳೆ ಬಿಡುವ ಲಕ್ಷಣಗಳಿಲ್ಲ. ನಕ್ಷತ್ರಗಳು ಕಾಣುವುದಿಲ್ಲ. ಒಂದು ವೇಳೆ ಮೋಡ ಕರಗಿ, ಚದುರಿ ಬಾನು ಸ್ವಚ್ಛವಾದರೂ ಬೆಂಗಳೂರಿನ ದೀಪಗಳ ಬೆಳಕು, ದೂಳು ಅವುಗಳ ನಗೆಯನ್ನು, ತುಂಟತನವನ್ನು ಕಿತ್ತುಕೊಂಡಿರುತ್ತವೆ.

ಅದನ್ನೇ ಯೋಚಿಸುತ್ತ ಹಾಸಿಗೆ ಮೇಲೆ ಒರಗಿಕೊಂಡವನಿಗೆ ಯಾವಾಗ ನಿದ್ರೆ ಬಂದಿತ್ತೋ! ಫಕ್ಕನೆ ಬಿದ್ದ ಬೆಳಕಿಗೆ ಎಚ್ಚರವಾಯಿತು. ರಾತ್ರಿ ತಡವಾಗಿ ಕರೆಂಟ್ ಬಂದಿತ್ತು. ಸ್ವಿಚ್‌ಗಳನ್ನು ಆಫ್‌ ಮಾಡದೆ ಮಲಗಿದ್ದರಿಂದ ಅಪರಾತ್ರಿಯಲ್ಲಿ ಇಡೀ ಮನೆಯ ತುಂಬ ಬೆಳ್ಳಂಬೆಳಕು.

ಮಗಳು ಎದ್ದಾಳೆಂಬ ಧಾವಂತದಿಂದ ಲೈಟ್‌ಗಳನ್ನು ಆರಿಸಿದೆ. ಫ್ಯಾನ್‌ನ ವೇಗ ಕಡಿಮೆ ಮಾಡಿದೆ. ಕೊನೆಯ ಲೈಟ್‌ ಆರಿಸಿದಾಗ- ಹಿತವಾದ ಮಬ್ಬುಗತ್ತಲು. ಅರೆ ಕ್ಷಣ ಮೌನವಾಗಿ ಕೂತೆ. ಮನಸ್ಸಿನ ತುಂಬ ಊರ ನಕ್ಷತ್ರಗಳದೇ ಜಾತ್ರೆ.

ತಕ್ಷಣ ಎದ್ದು, ಟೇಬಲ್‌ ಲ್ಯಾಂಪ್‌ ಉರಿಸಿ ಕೂತು ಇದನ್ನೆಲ್ಲ ಬರೆದೆ.

- ಚಾಮರಾಜ ಸವಡಿ
೨೨-೫-೨೦೦೮





ಕಿಟಕಿಯಾಚೆ ಚಂದ್ರ

23 05 2008

ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ.

ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿದ್ದಾನೆ.

ಇದಕ್ಕೂ ಮೊದಲು, ಯಾವ ದುಃಖದಲ್ಲಿದ್ದನೋ ಏನೋ, ಬೆಳ್ಳಗೆ ಲಕಲಕಿಸುತ್ತ ದುಂಡಗಿದ್ದವ ಇದ್ದಕ್ಕಿದ್ದಂತೆ ಸೊರಗತೊಡಗಿದ್ದ ರಾತ್ರಿ ತಡವಾಗಿ, ತೂಕಡಿಕೆಯಲ್ಲಿದ್ದವನಂತೆ, ಕುಡಿದು ಕೂತವನು ಎದ್ದು ಹೋಗಲು ಮರೆತಂತೆ ತಾರಾಡುತ್ತ ಬರುತ್ತಿದ್ದ. ಮುಖದಲ್ಲಿ ಮೊದಲಿನ ಕಳೆಯಿದ್ದಿಲ್ಲ. ಹೀಗೆ ಸೊರಗುತ್ತ, ಕರಗುತ್ತ ಹೋದವ ಒಂದಿನ ಬರಲೇ ಇಲ್ಲ.

ಅವತ್ತೇಕೋ ಮನಸ್ಸಿನ ತುಂಬ ಕತ್ತಲು.

ಇನ್ನು ಅವ ಬರಲಾರ ಅಂದುಕೊಂಡಿದ್ದೆ. ಪಾಪದವ. ಯಾಕೆ ನವೆಯುತ್ತಿದ್ದನೋ. ಏನು ಕಾರಣವೋ. ಯಾರೊಂದಿಗೂ ಹೇಳಿಕೊಂಡವನಲ್ಲ. ಹೇಳಿಕೊಳ್ಳಲಾದರೂ ಅವನಿಗೆ ಯಾರಿದ್ದರು? ದೂರದಲ್ಲಿ ನಿಂತು ತಣ್ಣಗೆ ಮುಸಿನಗುವ ಚಿಕ್ಕಿಯರು. ಸೆರಗಿನ ಮರೆಯಲ್ಲಿ ಬಚ್ಚಿಟ್ಟುಕೊಂಡಂತೆ ಮಾಡುತ್ತಲೇ ಬಿಚ್ಚಿ ಓಡುವ ಮೋಡಗಳು. ಕೆಟ್ಟ ಮುಖದ ಸೂರ್ಯ ಉರಿಯುತ್ತ ಬಂದರೆ ಇವನ ಮುಖ ಮಂಕು.

ಉರಿವ ಸೂರ್ಯನಿರುವಾಗ ಮಂಕು ಚಂದ್ರಮ ಯಾರಿಗೆ ಬೇಕು?

ಆದರೂ, ರಾತ್ರಿ ಆಗೀಗ ಅವನ ನೆನಪಾಗುತ್ತಿತ್ತು. ಆದರೆ, ಅವನು ಬರುವುದು ಯಾವಾಗೋ ಏನೋ. ಊರ ದೀಪಗಳು ನೈಟ್‌ ಡ್ಯೂಟಿ ಪ್ರಾರಂಭಿಸಿದಾಗ, ರಾತ್ರಿ ಪಾಳಿ ಮುಗಿಸಿ ಎಲ್ಲರೂ ತಂತಮ್ಮ ನೆಲೆಗಳಲ್ಲಿ ನಿದ್ರೆಗೆ ಜಾರುವ ಹೊತ್ತು, ಒಲ್ಲದ ಅತಿಥಿಯಂತೆ, ಅಪರಾಧಿಯಂತೆ, ದೂಷಣೆಗೆ ಒಳಗಾದವನಂತೆ, ಪಾಪಪ್ರಜ್ಞೆಯಿಂದ ಬಳಲುವವನಂತೆ ಕಳ್ಳ ಹೆಜ್ಜೆ ಇಟ್ಟು ಬರುತ್ತಿದ್ದ. ಅವನಿಗೆ ಕಾಯುತ್ತ ಕೂರಲಾದರೂ ಯಾರಿದ್ದರು?

ಆದರೂ ನನಗೆ ಅವನ ನೆನಪು ತುಂಬಾ ತುಂಬಾ ಆಗುತ್ತಿತ್ತು. ಏಕೋ ಏನೋ, ಅವನ ಬದುಕು ನನಗಿಷ್ಟ. ಎಷ್ಟೋ ಸಾರಿ ನಾನೂ ಚಂದ್ರನಂತೆ ಬದುಕಿದ್ದೇನೆ. ಸೊರಗುತ್ತ, ಕರಗುತ್ತ, ಇಲ್ಲವಾಗುತ್ತ, ಮತ್ತೆ ಬೆಳೆಯುತ್ತ, ಬೆಳಗುತ್ತ, ತುಂಬಿಕೊಂಡು ದುಂಡಗಾಗಿದ್ದೇನೆ. ಅವನಂತೆ ನನಗೂ ನೋವುಗಳಿದ್ದವು. ಅವಮಾನಗಳಿದ್ದವು. ಸಲ್ಲದ ದೂಷಣೆಗಳು, ಗೆಲ್ಲದ ದೌರ್ಬಲ್ಯಗಳಿದ್ದವು. ಇವೆಲ್ಲ ಅತಿರೇಕಕ್ಕೆ ಹೋಗಿ, ಅವನಂತೆ ನಾನೂ ಆಗಾಗ ಇಲ್ಲವಾಗುತ್ತಿದ್ದೆ. ಮತ್ತೆ ಬೀಜದಷ್ಟು ಶ್ರದ್ಧೆ ಬೆಳೆಯುತ್ತಿತ್ತು. ಹೊಸ ಕನಸು ತುಂಬಿಕೊಳ್ಳುತ್ತಿತ್ತು. ಚಿಕ್ಕಿಗಳ ಗೇಲಿ ಲೆಕ್ಕಿಸದೇ ಹುಡುಗಿಯರು ಮೋಹದ ಸೆರಗಿನ ತಡೆಯನ್ನು ದಾಟಿ ಬೆಳೆದು ನಳನಳಿಸುತ್ತಿದ್ದೆ.

ಚಂದ್ರ ನನಗೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ.

ಅವ ಕಿಟಕಿಯಾಚೆಗೇ ಸಿಗುತ್ತಾನೆ. ಕೈ ಚಾಚಿದರೆ ಸಿಕ್ಕೇಬಿಡುತ್ತಾನೇನೋ ಎನ್ನುವಷ್ಟು ಹತ್ತಿರ. ಏನನ್ನಾದರೂ ಹೇಳಿಕೊಂಡರೆ ತುಂಬ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾನೆ. ತಂಪಗೇ ಸಮಾಧಾನ ಮಾಡುತ್ತಾನೆ. ತನ್ನ ಮಿತಿಯಲ್ಲೇ ಸಾಧ್ಯವಾದಷ್ಟೂ ದಾರಿ ತೋರುತ್ತಾನೆ. ಸರಳುಗಳಾಚೆ ಇದ್ದರೂ ಬಂಧನ ದಾಟಿ ಒಳಬಂದು ಸಂತೈಸುತ್ತಾನೆ. ನಾನು ಹೇಳಿದ ಕತೆಗಳ ಗುಟ್ಟನ್ನು, ನೋವುಗಳ ಕಾರಣಗಳನ್ನು ಯಾರೆದುರೂ ಬಯಲು ಮಾಡುವುದಿಲ್ಲ. ನನ್ನ ಕತೆಗಳನ್ನು ಗೇಲಿ ಮಾಡುವುದಿಲ್ಲ. ಮೌನವಾಗೇ ಕೇಳಿಸಿಕೊಳ್ಳುತ್ತಾನೆ. ತನ್ನ ಬಗ್ಗೆ ಮೌನವಾಗೇ ಹೇಳಿಕೊಳ್ಳುತ್ತಾನೆ. ಹೇಳುತ್ತ, ಕೇಳುತ್ತ ರಾತ್ರಿ ಯಾವ ಮಾಯದಲ್ಲೋ ಇಬ್ಬರೂ ನಿದ್ರೆಗೆ ಜಾರಿಬಿಟ್ಟಿರುತ್ತೇವೆ.

ಸರಳಿನಾಚೆಯ ಚಂದ್ರನ ಮೌನ ಸಂದೇಶ, ಸಾಂತ್ವನ, ಸಹೃದಯತೆ ನನ್ನನ್ನು ಸಾವಿರ ಸಾವಿರ ಸಲ ಜೀವನ್ಮುಖಿ ಮಾಡಿವೆ. ಬದುಕು ಎದುರಿಸುವಂಥ ಭರವಸೆ ಕೊಟ್ಟಿವೆ. ಎಲ್ಲ ಮೋಡಗಳ ಸೆರಗಿನಾಚೆಗೂ, ತಡೆಗಳಾಚೆಗೂ, ಮೂದಲಿಕೆ, ಹೀಯಾಳಿಕೆ, ಆರೋಪ, ನಿರ್ಲಕ್ಷ್ಯದಾಚೆಗೂ ಬೆಳಗಬಲ್ಲ ವಿಶ್ವಾಸ ತುಂಬಿವೆ. ಏರಿಳಿತಗಳಿವೆ ನಿಜ. ಆದರೆ, ಸಾವಿಲ್ಲ. ಮತ್ತೆ ಮತ್ತೆ ತಲೆ ಎತ್ತಿ ನೋಡುವಂತೆ, ನೋಡಿ ಮೆಚ್ಚುವಂತೆ, ಮೆಚ್ಚಿ ಆದರಿಸುವಂತೆ ಮಾಡಿವೆ.

ಆದ್ದರಿಂದಲೇ ಮನಸ್ಸಿಗೆ ಕಾವಳ ಕವಿದಾಗೆಲ್ಲ ಸರಳಿನಾಚೆ ದಿಟ್ಟಿಸಿ ನೋಡುತ್ತೇನೆ.

ಅಲ್ಲಿ ಚಂದ್ರ ಕಾಣುತ್ತಾನೆ- ಭರವಸೆಯಂತೆ, ಬದುಕಿನಂತೆ, ಅವುತಂದು ಕೊಡುವ ನೆಮ್ಮದಿಯಂತೆ. ತಂಪಾಗಿ, ಚೆಂದಗೆ, ಬೆಳ್ಳಗೇ ಕಳೆಯಾಗಿ ಕಾಣುತ್ತಾನೆ.

ಮನಸ್ಸಿಗೆ ಹಾಯ್‌ ಅನ್ನಿಸುತ್ತದೆ!

- ಚಾಮರಾಜ ಸವಡಿ





ಕರ್ನಾಟಕ ಚುನಾವಣೆ-ಎರಡು ಹಂತಗಳು

23 05 2008

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.

ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.

ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.

ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ





ಮೊದಲ ಹಂತದ ಚುನಾವಣೆಯ ಮುನ್ಸೂಚನೆ

23 05 2008

ಸ್ನೇಹಿತರೇ,

ಮೊದಲ ಹಂತದ ಚುನಾವಣೆ ಮುಗಿದಿದೆ. ಶಾಂತಿಯುತವಾಗಿ ಮುಗಿದಿದೆ ಎಂಬ ಸಮಾಧಾನ ಒಂದೆಡೆಯಾದರೆ, ಮತದಾನ ಪ್ರಮಾಣ ಕಡಿಮೆಯಾಗಿದ್ದರೂ, ತಕ್ಕ ಮಟ್ಟಿಗೆ ವಿವೇಚನೆಯುಳ್ಳ ಮತದಾರರು ಪಾಲ್ಗೊಂಡಿದ್ದರು ಎಂಬ ಸಮಾಧಾನ ಇನ್ನೊಂದೆಡೆ.

ಇದಕ್ಕೆ ಹಲವಾರು ಕಾರಣಗಳಿವೆ.

ಮೊದಲನೆಯದಾಗಿ ಚುನಾವಣಾ ಆಯೋಗ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳು. ಚುನಾವಣೆ ಪ್ರಕ್ರಿಯೆ ಘೋಷಣೆಯಾದ ಕೂಡಲೇ ರಾಜ್ಯದ ವಿವಿಧೆಡೆ ಕೈಗೊಂಡ ಭದ್ರತಾ ಕ್ರಮಗಳಿಂದಾಗಿ ಕೋಟ್ಯಂತರ ರೂಪಾಯ ಮೌಲ್ಯದ ಮದ್ಯ, ಮತದಾರರಿಗೆ ಹಂಚಲು ತಂದಿದ್ದ ಸೀರೆಗಳು, ಬಟ್ಟೆ-ಬರೆಗಳು, ಪಾತ್ರೆ ಪಡಗಗಳು, ಟಿವಿ, ಕೈಗಡಿಯಾರ ಇತ್ಯಾದಿ ವಸ್ತುಗಳ ಜೊತೆಗೆ ವಾಹನಗಳು ಹಾಗೂ ನಗದನ್ನು ಸಹ ವಶಪಡಿಸಿಕೊಳ್ಳಲಾಯಿತು. ಇದರಿಂದ ಬೆದರಿದ ರಾಜಕೀಯ ಪಕ್ಷಗಳು ಹಾಗೂ ಉಳ್ಳ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಲು ಹಿಂದೆಮುಂದೆ ನೋಡುವಂತಾಯಿತು.

ಎರಡನೆಯದಾಗಿ, ಪ್ರತಿ ಸಲ ಚುನಾವಣೆಯಲ್ಲಿ ದೊರೆಯುತ್ತಿದ್ದ ಉಚಿತ ಊಟ, ಬಟ್ಟೆ-ಬರೆ, ಮದ್ಯ ಹಾಗೂ ಹಣ ಈ ಸಲ ಸಿಗದಿದ್ದರಿಂದ ಬಡ ಹಾಗೂ ಅಶಿಕ್ಷಿತ ಮತದಾರರ ಪೈಕಿ ಬಹಳಷ್ಟು ಜನ ಮತದಾನ ಮಾಡಿಲ್ಲ. ಆದರೆ, ಮತದಾನದ ಮಹತ್ವ ಕುರಿತು ಸಾಕಷ್ಟು ಪ್ರಚಾರ ನಡೆದಿದ್ದರಿಂದ ವಿದ್ಯಾವಂತ ಹಾಗೂ ಇದೇ ಮೊದಲ ಬಾರಿ ಮತದಾನದ ಅರ್ಹತೆ ಪಡೆದಿದ್ದ ಯುವ ಜನಾಂಗ ದೊಡ್ಡಪ್ರಮಾಣದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು.

ಹೀಗಾಗಿ, ಒಟ್ಟಾರೆ ಮತದಾನ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸ ಇಲ್ಲದಿದ್ದರೂ, ಆಗಿರುವ ಮತದಾನದ ಪೈಕಿ ಪ್ರಜ್ಞಾವಂತರ, ವಿದ್ಯಾವಂತರ ಪಾಲು ದೊಡ್ಡದಿದೆ ಎಂಬುದು ಸಮಾಧಾನದ ಸಂಗತಿ. ಇದರ ನೇರ ಪರಿಣಾಮ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಮೇಲೆ ಆಗಲಿದೆ ಎನ್ನಬಹುದು.

ಏಕೆಂದರೆ, ಇದುವರೆಗಿನ ಅನುಭವದ ಪ್ರಕಾರ, ವಿದ್ಯಾವಂತರು ಬಿಜೆಪಿ ಬೆಂಬಲಿಸುವುದು ಹೆಚ್ಚು. ಅದು ಸತ್ಯ ಎನ್ನುವುದಾದರೆ, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಮುನ್ನಡೆ ಸಾಧಿಸಲಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬರಲಿದೆ ಎಂಬುದು ಒಂದು ಅಂದಾಜು.

ಇದು ದೂರದಲ್ಲಿರುವ ಎಲ್ಲ ಕನ್ನಡಿಗರ ಗಮನಕ್ಕೆ ಎಂದು ಬರೆದಿದ್ದೇನೆ. ಉಳಿದಿದ್ದನ್ನು ನೀವೇ ಬಲ್ಲಿರಿ. ಅಲ್ಲವೆ?

- ಚಾಮರಾಜ ಸವಡಿ





ಡ್ರೈವರ್‌ ಎಂಬ ಆಪತ್ಬಾಂಧವ

23 05 2008

ಆಗಿನ್ನೂ ಚುಮು ಚುಮು ಬೆಳಕು.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ರಾತ್ರಿ ಹತ್ತು ಗಂಟೆಯ ಸುಮಾರು ಬೆಂಗಳೂರಿನ ಬಸ್‌ ನಿಲ್ದಾಣದಲ್ಲಿ ಬಸ್‌ ಏರಿದಾಗ ಡ್ರೈವರ್‌ ಇನ್ನೂ ಬಂದಿರಲಿಲ್ಲ. ಕೊಂಚ ಹೊತ್ತು ಕಾದಂಬರಿಯೊಂದನ್ನು ಓದುತ್ತಾ ಕುಳಿತೆ. ಡ್ರೈವರ್‌ ಬಂದ. ಕಂಡಕ್ಟರ್‌ ರೈಟ್‌ ಎಂದು ಕೂಗಿದ ಕೂಡಲೇ ಗುರುಗುಡುತ್ತಿದ್ದ ಬಸ್‌ನ ಗೇರ್‌ ಮೇಲಿನ ಕಾಲನ್ನು ತೆಗೆದವನೇ ಆಕ್ಸಿಲೇಟರ್‌ ಒತ್ತಿದ. ಏಟು ತಿಂದ ಬೆಕ್ಕಿನಂತೆ ಚೆಂಗನೇ ಮುಲುಗಿದ ಬಸ್ಸು ಸ್ಟ್ಯಾಂಡ್‌ನ ಆ ಮಹಾ ಸಂದಣಿಯಲ್ಲಿ ದಾರಿ ಸಿಕ್ಕ ಕಡೆ ನುಗ್ಗತೊಡಗಿತು.

ನನಗೆ ಗಾಬರಿಯಾಯಿತು. ಇನ್ನೂ ಎಂಟು ಗಂಟೆಗಳ ಕಾಲ ಬಸ್ಸಿನಲ್ಲಿ ಕೂತಿರಬೇಕು. ಈ ಮನುಷ್ಯ ನೋಡಿದರೆ ಲೋಡ್‌ ಆಗಿ ಬಂದವನಂತೆ ಕಾಣುತ್ತಾನೆ. ಇನ್ನು ೪೨೫ ಕಿಮೀ ಹೇಗೆ ಓಡಿಸುತ್ತಾನೋ ಎಂದು ಚಿಂತಿತನಾದೆ. ಬಸ್‌ ಅಷ್ಟೊತ್ತಿಗಾಗಲೇ ಬಸ್‌ಸ್ಟ್ಯಾಂಡ್‌ನಿಂದ ಹೊರಗೆ ರಾಕೆಟ್‌ನಂತೆ ನುಗ್ಗಿ, ಒಂದು ಬಲವಾದ ತಿರುವು ತೆಗೆದುಕೊಂಡು ಮುಖ್ಯ ರಸ್ತೆ ಪ್ರವೇಶಿಸಿತ್ತು. ಬಸ್‌ ಅಲ್ಲಾಡಿದ ರಭಸಕ್ಕೆ ಪ್ರಯಾಣಿಕರೆಲ್ಲ ಶಬರಿಮಲೆಗೆ ಹೊರಟ ಭಕ್ತರಂತೆ ’ಹೋ’ ಎಂದು ಕಿರುಚಿಕೊಂಡರು. ಚಿಕ್ಕಮಕ್ಕಳು ಬೆಚ್ಚಿ ಬಿದ್ದು ಕಿರುಲತೊಡಗಿದವು.

ಸುದೀರ್ಘ ಪ್ರಯಾಣವೊಂದು ಪ್ರಾರಂಭವಾಗಿತ್ತು.

ಸಾಮಾನ್ಯವಾಗಿ ಬಸ್‌ ನಗರದ ಹೊರವಲಯಕ್ಕೆ ಬರುತ್ತಿದ್ದಂತೆ ನಿದ್ರೆ ಹೋಗುವ ನನಗೆ ಅವತ್ತು ರಾತ್ರಿಯಿಡೀ ಕಣ್ಣು ಮುಚ್ಚಲಾಗಲಿಲ್ಲ. ಮೆಜೆಸ್ಟಿಕ್‌ ದಾಟಿದ ಬಸ್‌ ಮುಂದೆ ಹೋಗುತ್ತಿದ್ದ ವಾಹನಗಳನ್ನೆಲ್ಲ ತನ್ನ ಪ್ರತಿಸ್ಪರ್ಧಿಗಳೆಂದೇ ಭಾವಿಸಿತ್ತು. ಅವರನ್ನೆಲ್ಲ ಹಿಂದೆ ಹಾಕಿ ಮುಂದೆ ಹೋಗುವುದೇ ತನ್ನ ತಕ್ಷಣದ ಕರ್ತವ್ಯ ಎಂದು ಡ್ರೈವರ್‌ ಭಾವಿಸಿಕೊಂಡಂತಿತ್ತು. ತನ್ನೆದುರು ಓಡುತ್ತಿದ್ದ ವಾಹನಗಳನ್ನು ಮುಲಾಜಿಲ್ಲದೇ ಹಿಂದೆ ಹಾಕುತ್ತಾ, ಯಾವನಾದರೂ ಸೈಡ್‌ ಕೊಡದಿದ್ದರೆ ಅವನನ್ನು ತನ್ನ ಉತ್ತರ ಕರ್ನಾಟಕದ ಅಚ್ಚ ಕನ್ನಡದ ಬೈಗುಳಗಳಿಂದ ಪಾವನಗೊಳಿಸುತ್ತ, ಓವರ್‌ಟೇಕ್‌ ಮಾಡಿದ ಕೂಡಲೇ ’ಹೋ’ ಎಂದು ತನಗೆ ತಾನೇ ವಿಜಯೋತ್ಸವ ಆಚರಿಸಿಕೊಳ್ಳುತ್ತಾ ನಮ್ಮ ಡ್ರೈವರ್‌ ರೇಸ್‌ನಲ್ಲಿ ಭಾಗವಹಿಸಿದವನಂತೆ ಹೊರಟ.

ನನ್ನ ಅಳಿದುಳಿದ ನಿದ್ದೆಯೂ ಹಾರಿಹೋಯಿತು.

ಅಷ್ಟೊತ್ತಿಗಾಗಲೇ ಅಕ್ಕಪಕ್ಕದ ಸಣ್ಣಪುಟ್ಟ ವಾಹನಗಳು ಈ ಬಸ್‌ ನುಗ್ಗಿ ಬರುತ್ತಿದ್ದ ವೇಗ ಕಂಡು ನಿಬ್ಬೆರಗಾಗಿ ಹೋಗಿದ್ದವು. ಆದರೆ, ನಮ್ಮ ಬಸ್‌ನ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಮಾತ್ರ ಏನು ಮಾಡಿದರೂ ಸೈಡ್‌ ಕೊಡಲಿಲ್ಲ. ನಮ್ಮ ಡ್ರೈವರ್‌ ತನಗೆ ಗೊತ್ತಿರುವ ಉತ್ತರ ಕರ್ನಾಟಕದ ಅಷ್ಟೂ ಬೈಗುಳಗಳನ್ನು ಮನ ಬಂದಂತೆ ಪ್ರಯೋಗಿಸಿದರೂ ಕೆಲಸವಾಗಲಿಲ್ಲ. ಕೊನೆಗೆ, ’ಭಾಂಚೋತ್‌’ ಎಂದು ಹಿಂದಿ ಬೈಗುಳ ಭಂಡಾರ ಉದ್ಘಾಟಿಸಿದ. ಬಸ್ಸು ಅಷ್ಟೊತ್ತಿಗೆ ಜಿಂದಾಲ್‌ ಹತ್ತಿರ ಬಂದಿತ್ತು.

ಎಂದಿನಂತೆ ಅಲ್ಲೊಂದು ಚಿಕ್ಕ ಟ್ರಾಫಿಕ್‌ ಜಾಮ್‌. ಲಾರಿ ಮಹಾತ್ಮರು ಪೂರ್ತಿ ಲೋಡಾಗಿದ್ದ ತಮ್ಮ ಗಾಡಿ ಮತ್ತು ಬಾಡಿಗಳ ಸಹಿತ, ಮೆರವಣಿಗೆ ಹೊರಟಿದ್ದಾರೋ ಎಂಬಂತೆ ಲಾರಿಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿಕೊಂಡು ಶ್ರದ್ಧೆಯಿಂದ ನಿರಂತರವಾಗಿ ಹಾರ್ನ್‌ ಬಾರಿಸುತ್ತಿದ್ದರು. ಆ ಮೇಳಕ್ಕೆ ನಮ್ಮ ಮುಂದಿದ್ದ ಖಾಸಗಿ ಬಸ್‌ ಹಾಗೂ ನಾನು ಕೂತಿದ್ದ ಸರ್ಕಾರಿ ಬಸ್‌ಗಳು ಸೇರಿಕೊಂಡವು. ನಮ್ಮ ಡ್ರೈವರ್‌ ಏನೇನೋ ಕಸರತ್ತು ಮಾಡಿ, ಆ ಖಾಸಗಿ ಬಸ್‌ನ ಪಕ್ಕವೇ ತನ್ನ ಬಸ್‌ ನಿಲ್ಲಿಸಿ, ಸ್ಟೀರಿಂಗ್‌ ಮೇಲೆಯೇ ಕೊಂಚ ಬಾಗಿ, ತನ್ನ ಏರ್‌ ಹಾರ್ನ್‌ ಇನ್ನಷ್ಟು ತೀಕ್ಷ್ಣವಾಗಿ ಬಾರಿಸುತ್ತ, ಅದಕ್ಕಿಂತ ಜೋರಾಗಿ ಆ ಖಾಸಗಿ ಬಸ್‌ನ ಡ್ರೈವರ್‌ನಿಗೆ, ’ಯಾಕಲೇ ಬೋಸುಡಿಕೆ, ಮುಕಳಿ ಸಣ್ಣಗ ಕಡಿತತೇನು?’ ಎಂದು ಬೈದ.

ಅಲ್ಲಿಗೆ ಇತರ ಪ್ರಯಾಣಿಕರ ನಿದ್ರೆಯೂ ಹಾರಿ ಹೋಯಿತು.

ಮುಂದಿನ ಐದು ನಿಮಿಷಗಳಲ್ಲಿ ಎರಡೂ ಬಸ್‌ನ ಡ್ರೈವರ್‌ಗಳು ತಂತಮ್ಮ ಹಾರ್ನ್‌‌ಗಳನ್ನು ಮೊಳಗಿಸುತ್ತ, ತಮ್ಮ ಮುಂದೆ ಹಾಗೂ ಹಿಂದೆ ಇದ್ದ ವಾಹನಗಳು ಹೊರಡಿಸುತ್ತಿದ್ದ ಹಾರ್ನ್‌ ಹಿಮ್ಮೇಳದಲ್ಲಿ ಪರಸ್ಪರ ವಾಚಾಮಗೋಚರವಾಗಿ ಬೈದುಕೊಂಡರು. ಆ ಐದು ನಿಮಿಷಗಳಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ವಿಶಿಷ್ಟ, ಅತಿ ವಿಶಿಷ್ಟ ಹಾಗೂ ಪರಮ ವಿಶಿಷ್ಟ ಬೈಗುಳಗಳಷ್ಟೂ ನನ್ನ ಕಿವಿಗೆ ಬಿದ್ದು ನಾನು ಪಾವನನಾಗಿ ಹೋದೆ.

ನಿಧಾನವಾಗಿ ಟ್ರಾಫಿಕ್‌ ಸರಾಗವಾಗತೊಡಗಿತು. ಯಾವಾಗ ತಮ್ಮ ಮುಂದಿನ ವಾಹನಗಳು ಕಟು ಹೊಗೆ ಕಕ್ಕುತ್ತ, ಗುರುಗುಡುತ್ತ ನಿಧಾನವಾಗಿ ಚಲಿಸತೊಡಗಿದವೋ, ಈ ಇಬ್ಬರೂ ಬೈಗುಳ ಭೀಷ್ಮರು ಜಾಗೃತರಾದರು. ಬೈಯುವುದನ್ನು ನಿಲ್ಲಿಸಿ, ತಮ್ಮ ವಾಹನಗಳನ್ನು ಮುಂದೆ ಒಯ್ಯಲು ಪ್ರಯತ್ನಿಸತೊಡಗಿದರು. ಮತ್ತೊಂದು ರೇಸ್‌ ಪ್ರಾರಂಭವಾಯಿತು.

ನಾನು ಮುಂದಿನ ಸೀಟ್‌ನ ಹ್ಯಾಂಡಲ್‌ ಹಿಡಿದುಕೊಂಡು, ಒಂದು ಕಾಲನ್ನು ಓಡುವ ಸ್ಪರ್ಧೆಯಲ್ಲಿ ಕ್ರೀಡಾಪಟು ಇಟ್ಟುಕೊಂಡಿರುತ್ತಾನಲ್ಲ, ಹಾಗೆ ಮುಂಚಾಚಿ, ಬರಬಹುದಾದ ಯಾವುದೇ ರೀತಿಯ ಅವಘಡ ಎದುರಿಸಲು ಸನ್ನದ್ಧನಾಗಿ ಕೂತುಕೊಂಡೆ. ಬಹುಶಃ ತಮ್ಮದೇ ಆದ ವಿಧಾನಗಳಲ್ಲಿ ಇತರ ಪ್ರಯಾಣಿಕರೂ ತಯಾರಾಗಿದ್ದಿರಬಹುದು. ಏಕೆಂದರೆ, ಬಸ್‌ ಓಡುವ ರೀತಿಯೇ ಹಾಗಿತ್ತು. ಒಬ್ಬ ಪ್ರಯಾಣಿಕನೂ ಕಣ್ಣು ಮುಚ್ಚಿದ್ದಿಲ್ಲ. ಮುಚ್ಚಿದ್ದರೂ ಅದು ಪ್ರಾರ್ಥನೆಗಾಗಿ. ಮಹತ್ವದ್ದಾದ ಏನೋ ಘಟಿಸಲಿದೆಯೋ ಎಂಬಂತೆ ಚಿಕ್ಕ ಮಕ್ಕಳು ಸಹ ಎದ್ದಿದ್ದವು.

ಇದ್ದಕ್ಕಿದ್ದಂತೆ ನಮ್ಮ ಬಸ್‌ ವೇಗ ಪಡೆದುಕೊಂಡಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ, ನಮ್ಮ ಡ್ರೈವರ್‌ ವಿಜಯೋತ್ಸಾಹದಿಂದ ಪರಮ ಅಶ್ಲೀಲ ಬೈಗುಳವೊಂದನ್ನು ಹಿಂದೆ ಬಿದ್ದಿದ್ದ ಆ ಖಾಸಗಿ ಬಸ್‌ನ ಡ್ರೈವರ್‌ಗೆ ರವಾನಿಸಿ, ಯಮವೇಗದಲ್ಲಿ ಮುಂದೆ ಹೊರಟ. ನಂತರ, ಆ ಖಾಸಗಿ ಬಸ್‌ ಡ್ರೈವರ್‌ ಏನೇ ತಿಪ್ಪರಲಾಗ ಹಾಕಿದರೂ ಇವ ಸೈಡ್‌ ಕೊಡಲಿಲ್ಲ. ’ಸೈಡ್‌ ಬೇಕನ್ಲೇ ಕಳ್ಳಿ? ಬಾ ಒಂದು ಕೈ ನೋಡ್ತೀನಿ’ ಎಂದು ಉತ್ಸಾಹದಿಂದ ಕೂಗುತ್ತ, ಆಕ್ಸಿಲೇಟರ್‌ ಒತ್ತತೊಡಗಿದ.

ಆ ಭರದಲ್ಲಿ ತುಮಕೂರು ಸಮೀಪಿಸಿದ್ದು ಯಾರ ಗಮನದಲ್ಲೂ ಇರಲಿಲ್ಲ. ಅಷ್ಟೊತ್ತಿಗೆ ಟ್ರಾಫಿಕ್‌ ಸರಾಗವಾಗಿತ್ತು. ಆ ಖಾಸಗಿ ಬಸ್‌ ಸಹ ಕಣ್ಣಿಗೆ ಬೀಳಲಿಲ್ಲ. ನಮ್ಮ ಡ್ರೈವರ್‌ನ ಬೈಗುಳಗಳಿಗೆ ಬಲಿಯಾಗಬಲ್ಲ ಯಾವ ಪಾಪಾತ್ಮನೂ ಮುಂದೆ ಸಿಗಲಿಲ್ಲ. ಹೀಗಾಗಿ ನಮ್ಮ ಬಸ್‌ ಒಂದು ಹದವಾದ ವೇಗದಲ್ಲಿ ಓಡತೊಡಗಿತು. ಅದರ ಇಂಜಿನ್‌ನ ’ಗುಂಯ್‌’ ಎಂಬ ಶಬ್ದ ಜೋಗುಳದಂತಾಗಿ, ಬಹುಪಾಲು ಪ್ರಯಾಣಿಕರು ಒಬ್ಬೊಬ್ಬರಾಗಿ ನಿದ್ದೆಗೆ ಜಾರಿದರು. ನಾನೂ ಸಹ, ಹ್ಯಾಂಡಲ್‌ ಮೇಲಿನ ಹಿಡಿತ ಸಡಿಲಿಸಿ, ಸೀಟನ್ನು ಹಿಂದಕ್ಕೆ ವಾಲಿಸಿಕೊಂಡು, ಕೈಗಳನ್ನು ಎದೆಯ ಮೇಲೆ ಮಡಿಚಿಕೊಂಡು ಗತಕಾಲದ ನೆನಪುಗಳಿಗೆ ಜಾರತೊಡಗಿದೆ.

ಚಿತ್ರದುರ್ಗ ಬಂತು. ಕೆಲ ಪ್ರಯಾಣಿಕರು ಇಳಿದರು. ನಾನೂ ಸಹ ಇಳಿದು ಕೊಂಚ ಹೊತ್ತು ಅಲ್ಲೇ ಅಡ್ಡಾಡಿದೆ. ಬಸ್‌ ಮತ್ತೆ ಹೊರಟಾಗ, ನನ್ನ ನಿದ್ರೆ ಹಾರಿಹೋಗಿತ್ತು. ’ಮುಂದೆ ಹೆದ್ದಾರಿ ಮುಗಿದು, ರಾಜ್ಯ ಹೆದ್ದಾರಿ ಎಂಬ ಕೆಟ್ಟ ರಸ್ತೆ ಶುರುವಾಗಿ ಧಕ್ಕಡಿಯಾಗುತ್ತದೆ’ ಎಂದು ಮಹಿಳೆಯೊಬ್ಬರು ವಿನಂತಿಸಿಕೊಂಡಿದ್ದರಿಂದ, ನನ್ನ ಸೀಟ್‌ ಬಿಟ್ಟುಕೊಟ್ಟು ಡ್ರೈವರ್‌ ಕ್ಯಾಬಿನ್‌ಗೇ ಹೋದೆ.

ಆಗಲೇ ನಾನು ಅವನ ಮುಖವನ್ನು ಸರಿಯಾಗಿ ನೋಡಿದ್ದು.

ರಾಜ್ಯ ಹೆದ್ದಾರಿಯೆಂಬ ಕೆಮ್ಮಣ್ಣುಗುಂಡಿ ಪ್ರವೇಶಿಸಿದಾಗ ಬಸ್‌ನ ವೇಗ ತಂತಾನೇ ಕಡಿಮೆಯಾಯಿತು. ಡ್ರೈವರ್‌ ಮಾತ್ರ ತನ್ನ ಎಂದಿನ ಧಾಟಿಯಲ್ಲೇ ಬಸ್‌ ಓಡಿಸುತ್ತಿದ್ದನಾದರೂ ಅವನಲ್ಲಿ ಈಗ ಮೊದಲಿನ ಉದ್ವೇಗ ಇರಲಿಲ್ಲ. ಅಲ್ಲದೇ ಬೈಸಿಕೊಳ್ಳಲು ಅವನ ಮುಂದೆ ಯಾವ ವಾಹನವೂ ಹೋಗುತ್ತಿರಲಿಲ್ಲ.

ಗತಕಾಲದ ನೆನಪುಗಳಲ್ಲಿ ಮುಳುಗಿದ್ದ ನನಗೆ ಧಡಕ್ಕನೇ ಎಚ್ಚರವಾದಾಗ ಹೊರಗೆ ತಿಳಿ ಬೆಳಕು. ಬಹುಶಃ ನಸುಕಿನ ಐದೂವರೆಯಾಗಿತ್ತು ಅನಿಸುತ್ತದೆ. ಬಸ್‌ ಯಾವ ಊರಿನ ಹತ್ತಿರವಿದೆ ಎಂಬುದು ತಕ್ಷಣಕ್ಕೆ ಗೊತ್ತಾಗುವಂತಿರಲಿಲ್ಲ. ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಇನ್ನೂ ದೂರವಿತ್ತೇನೋ. ಇದ್ದಕ್ಕಿದ್ದಂತೆ ಬಸ್‌ ನಿಂತಿತ್ತು. ಕಣ್ತೆರೆದ ನನಗೆ ಕಾಣಿಸಿದ್ದು ಡ್ರೈವರ್‌ನ ಭೀತಿ ತುಂಬಿದ ಮುಖ. ಆತ ತನ್ನ ಬಲಕ್ಕೆ ನೋಡುತ್ತಿದ್ದ. ಒಂದು ಕ್ಷಣ ಸುಮ್ಮನೇ ಕೂತಿದ್ದ ಆತ ಧಡಕ್ಕನೇ ಪಕ್ಕದ ಬಾಗಿಲು ತೆಗೆದುಕೊಂಡು ನಿಧಾನವಾಗಿ ಕೆಳಗೆ ಇಳಿದ.

ತೆರೆದ ಬಾಗಿಲಿನಿಂದ ಆಗ ಆ ದೃಶ್ಯ ಕಾಣಿಸಿತು.

ಬಿಳಿ ಮಾರುತಿ ಕಾರೊಂದು ರಸ್ತೆ ಪಕ್ಕದ ತಗ್ಗಿನಲ್ಲಿದ್ದ ಸಾಮಾನ್ಯ ಗಾತ್ರದ ಮರಕ್ಕೆ ಮೂತಿ ಹಚ್ಚಿಕೊಂಡು ನಿಂತಿತ್ತು. ಕಾರಿಗೆ ಹೆಚ್ಚು ಹಾನಿಯಾದ ಹಾಗೆ ಕಾಣಲಿಲ್ಲ. ಕಾರಿನ ಡ್ರೈವರ್‌ ಸ್ಟೀರಿಂಗ್‌ ಮೇಲೆ ಮುಖ ಇಟ್ಟುಕೊಂಡು ಮಲಗಿದಂತಿದ್ದ. ಅವನ ಪಕ್ಕದಲ್ಲಿದ್ದ ಯುವಕ ಕೂಡ ಅದೇ ಭಂಗಿಯಲ್ಲಿ, ಡ್ಯಾಷ್‌ ಬೋರ್ಡ್‌‌ಗೆ ಮುಖ ಆನಿಸಿಕೊಂಡಿದ್ದ. ತಲೆ ಬಗ್ಗಿಸಿದ್ದರಿಂದ ಇಬ್ಬರ ಮುಖಗಳೂ ಕಾಣುತ್ತಿರಲಿಲ್ಲ. ಆದರೆ, ಹಿಂದಿನ ಸೀಟ್‌ನಲ್ಲಿದ್ದ ಒಬ್ಬ ಮಧ್ಯವಯಸ್ಕ ಮತ್ತು ಇಬ್ಬರು ಯುವತಿಯರ ಮುಖಗಳು ಸ್ಪಷ್ಟವಾಗಿದ್ದವು. ಮೂವರ ತುಟಿಯಂಚಿನಿಂದ ಕಂಡೂ ಕಾಣದಂತೆ ರಕ್ತ ಒಸರುತ್ತಿತ್ತು.

ಗಾಬರಿಗೊಂಡಿದ್ದ ನಮ್ಮ ಡ್ರೈವರ್‌ನ ಹಿಂದೆಯೇ ನಾವೊಂದಿಷ್ಟು ಪ್ರಯಾಣಿಕರು ಅತ್ತ ಧಾವಿಸಿದೆವು. ಬಹುಶಃ ಅಪಘಾತ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿರಬೇಕು. ಹೀಗಾಗಿ ಸ್ಥಳದಲ್ಲಿ ಯಾರೂ ಇದ್ದಿಲ್ಲ. ಹತ್ತಿರ ಹೋದಂತೆ ಕಾರ್‌ನ ಸ್ಟಿರಿಯೋದಿಂದ ಸುಪ್ರಭಾತವೊಂದು ಕೇಳಿ ಬರತೊಡಗಿತು.

ಆದರೆ, ಕಾರ್‌ನಲ್ಲಿ ಕೂತವರಿಗೆ ಅದರ ಬಗ್ಗೆ ಗಮನವಿದ್ದಂತೆ ಕಾಣಲಿಲ್ಲ. ನಾವು ಕೂಗಿದಾಗಲೂ ಯಾರೂ ಓಗೊಡಲಿಲ್ಲ. ಅವರ ಭುಜಗಳನ್ನು ನಿಧಾನವಾಗಿ ಅಲ್ಲಾಡಿಸಿದೆವು. ಅವರು ಸ್ಪಂದಿಸಲಿಲ್ಲ. ಮೂಗಿನ ಹತ್ತಿರ ಬೆರಳಿಟ್ಟು ನೋಡಿದರೆ ಉಸಿರು ತಾಕಲಿಲ್ಲ.

ಕಾರಿನಲ್ಲಿದ್ದವರೆಲ್ಲ ಸತ್ತಿದ್ದರು. ಅದೂ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ.

ನನ್ನನ್ನು ದಿಗ್ಭ್ರಮೆಗೊಳಿಸಿದ್ದೇ ಅದು. ಕಾರನ್ನು ರಸ್ತೆ ತಿರುವಿನಲ್ಲಿ ನಿಯಂತ್ರಿಸಲು ವಿಫಲನಾಗಿದ್ದ ಡ್ರೈವರ್‌, ಅದನ್ನು ಪಕ್ಕದಲ್ಲಿದ್ದ ಮರಕ್ಕೆ ಅಪ್ಪಳಿಸಿದ್ದ. ನಿದ್ದೆಯಲ್ಲಿದ್ದ ಇತರ ನಾಲ್ವರು ಪ್ರಯಾಣಿಕರ ಯಾವ ಅಂಗಕ್ಕೆ ಪೆಟ್ಟು ಬಿದ್ದಿತ್ತೋ, ಎಲ್ಲ ಒಟ್ಟಿಗೇ ಜೀವ ಬಿಟ್ಟಿದ್ದರು. ಡ್ರೈವರ್‌ನ ಎದೆಗೆ ಸ್ಟೀರಿಂಗ್‌ ವ್ಹೀಲ್‌ ಗುದ್ದಿರಬೇಕು. ಅವನ ಮುಖ ಎತ್ತಿ ನೋಡಲು ಯಾರಿಗೂ ಮನಸ್ಸಾಗಲಿಲ್ಲ. ಒಂದು ಸಮಾನ ಆಘಾತ ನೆರೆದಿದ್ದ ಬಸ್‌ನ ಪ್ರಯಾಣಿಕರನ್ನು ಆವರಿಸಿಕೊಂಡು ದಿಗ್ಭ್ರಮೆಗೊಳಿಸಿತ್ತು.

ಅಷ್ಟೊತ್ತಿಗೆ ಬರುವ-ಹೋಗುವ ವಾಹನಗಳು ಅಲ್ಲಲ್ಲಿ ನಿಂತಿದ್ದವು. ಅಪಘಾತ ನೋಡಲು ನೂಕುನುಗ್ಗಲು ಶುರುವಾಗಿತ್ತು. ಜನರ ಗುಜು ಗುಜು, ವಾಹನಗಳ ದಟ್ಟಣೆಯಿಂದ ಎಚ್ಚೆತ್ತ ನಮ್ಮ ಬಸ್‌ನ ಡ್ರೈವರ್‌ ವಾಪಸ್‌ ಬಸ್ಸೇರಿ ಹಾರ್ನ್‌ ಬಾರಿಸಿದ. ನಾನು ಮತ್ತೆ ಕ್ಯಾಬಿನ್‌ ಹೊಕ್ಕಾಗ, ಅವನ ಮ್ಲಾನವಾದ ಮುಖ ನನ್ನನ್ನು ಸೆಳೆಯಿತು.

ಅಪಘಾತ ಸ್ಥಳದ ದಟ್ಟಣೆ ದಾಟಿಕೊಂಡು ಹೊರಟಾಗ ಬಸ್‌ನ ವೇಗ ತಂತಾನೆ ಕಡಿಮೆಯಾಗಿತ್ತು. ’ನಿಧಾನವಾಗಿ ಓಡಿಸು’ ಎಂದು ಯಾರೋ ನಿರ್ದೇಶಿಸಿದರೇನೋ ಎಂಬಂತೆ ಚಾಲಕ ಬಸ್‌ ಓಡಿಸುತ್ತಿದ್ದ. ಅವನಲ್ಲೀಗ ಬೈಗುಳಗಳಿರಲಿಲ್ಲ. ಅವಸರವಿರಲಿಲ್ಲ. ಸಾವಿನ ಸಮೀಪ ದರ್ಶನ ಅವನಲ್ಲಿದ್ದ ಮನುಷ್ಯತ್ವ ಎಚ್ಚರಿಸಿದೆಯೇನೋ ಎಂದು ನನಗೆ ಅನ್ನಿಸಿತು.

ಇದ್ದಕ್ಕಿದ್ದಂತೆ ನನ್ನ ಮುಖ ನೋಡಿದ ಆತ, ’ಸಾಹೇಬ್ರ ಇವತ್ತು ನನ್ನ ಮಗಳ ಹುಟ್ಟಿದ ಹಬ್ಬಾರೀ’ ಎಂದುಬಿಟ್ಟ.

ದೂರದ ಯಾವುದೋ ಊರಿನಲ್ಲಿದ್ದ ಮಗಳು ತನ್ನ ದಾರಿ ಕಾಯುತ್ತಿರುವ ಚಿತ್ರ ಅಲ್ಲಿ ಕಾಣುತ್ತಿದೆಯೇನೋ ಎಂಬಂತೆ ರಸ್ತೆಯನ್ನು ದಿಟ್ಟಿಸಿ ನೋಡುತ್ತಿದ್ದ ಅವನಲ್ಲಿ ಈಗ ಉದ್ವೇಗ ಇರಲಿಲ್ಲ. ಮನಸ್ಸು ಒಳಮುಖವಾಗಿತ್ತು.

ಅಷ್ಟೊತ್ತಿಗೆ ಹೊರಗೆ ಬೆಳ್ಳಂಬೆಳಕು.

ಪಾಪ, ಈ ಡ್ರೈವರ್‌ ಯಾವ ಊರಿನವನೋ. ಸಾವಿನ ದೃಶ್ಯ ಇವನ ಬದುಕಿನ ಬಳ್ಳಿಯನ್ನು ಕದಲಿಸಿದೆ ಎಂದು ಅನ್ನಿಸಿತು. ನಾವೆಲ್ಲ ಇವತ್ತು ಜೀವಂತವಾಗಿ ಓಡಾಡಲು ಸಾಧ್ಯವಾಗಿರುವುದು ಇಂತಹ ಸಾವಿರಾರು ಚಾಲಕರ ಕರ್ತವ್ಯಪ್ರಜ್ಞೆಯಿಂದ ಮಾತ್ರ ಎಂದು ಕೃತಜ್ಞತೆ ಉಕ್ಕಿತು. ಅದುವರೆಗಿನ ಅವನ ಬೈಗುಳಗಳು, ಕೆಟ್ಟ ಚಾಲನೆ, ಹುಂಬತನ ಮರೆತುಹೋದವು. ಅವನ ಮನುಷ್ಯ ಸಹಜ ಸ್ಪಂದನೆ ಮನಸ್ಸು ತಟ್ಟಿತು. ಮತ್ತೊಮ್ಮೆ ಅವನ ಮುಖ ದಿಟ್ಟಿಸುತ್ತಿದ್ದಂತೆ, ಇಡೀ ಚಾಲಕ ವರ್ಗದ ಬಗ್ಗೆ ನನ್ನಲ್ಲೊಂದು ಅಪಾರ ಗೌರವ ಅರಳತೊಡಗಿತು.

ಇವರು ಸರಿಯಾಗಿ ಚಾಲನೆ ಮಾಡಿದ್ದರಿಂದಲೇ ಅಲ್ಲವೇ ನಾವೆಲ್ಲ ಇವತ್ತು ಬದುಕಿದ್ದು? ಇಲ್ಲವಾಗಿದ್ದರೆ ನಾವೆಲ್ಲ ಯಾವತ್ತೋ ಸತ್ತಿರುತ್ತಿದ್ದೆವು- ಆ ಕಾರಿನ ಪ್ರಯಾಣಿಕರ ಹಾಗೆ.

ಬಸ್‌ಗೆ ಈಗ ಹದವಾದ ವೇಗ. ದಾರಿಯಲ್ಲಿ ಸಿಕ್ಕ ಚಿಕ್ಕ ಊರೊಂದರಲ್ಲಿ ಸಮವಸ್ತ್ರ ಧರಿಸಿದ್ದ ಬರಿಗಾಲ ಶಾಲಾ ಮಕ್ಕಳು ಕಣ್ಣಿಗೆ ಬಿದ್ದವು. ಅವರನ್ನು ನೋಡುತ್ತಿದ್ದಂತೆ ಡ್ರೈವರ್‌ ಜಾಗರೂಕನಾದ. ಬಸ್‌ ಹತ್ತಿರ ಬಂದಾಗ, ಆ ಮಕ್ಕಳು ಕುಣಿಯುತ್ತ ಡ್ರೈವರ್‌ ಮಾಮಾನಿಗೆ ಟಾಟಾ ಮಾಡಿ ಕೇಕೆ ಹಾಕಿದವು.

ನನಗೆ ಅಚ್ಚರಿಯಾಗುವಂತೆ, ನಮ್ಮ ಡ್ರೈವರ್‌ ಮುಗುಳ್ನಗುತ್ತ ವಾಪಸ್‌ ಟಾಟಾ ಮಾಡಿ ಮೆಲುವಾಗಿ ಹಾರ್ನ್‌ ಹೊಡೆದ. ಮಕ್ಕಳು ರಸ್ತೆ ದಾಟಿದಾಗ ಮತ್ತೆ ಬಸ್‌ನ ವೇಗ ಹೆಚ್ಚಿತು. ಆದರೆ, ಅದರಲ್ಲಿ ಉದ್ವೇಗವಿರಲಿಲ್ಲ, ಹಿಡಿತವಿತ್ತು. ಯಾವುದೋ ನಿರಾಳ ಭಾವ ಆವರಿಸಿದಂತಾಗಿ ನಾನು ಸೀಟ್‌ಗೆ ತಲೆಯಾನಿಸಿಕೊಂಡು ಕಣ್ಮುಚ್ಚಿದೆ. ಅದುವರೆಗೆ ಎಲ್ಲೋ ಮಾಯವಾಗಿದ್ದ ನಿದ್ದೆ ನಿಧಾನವಾಗಿ ಆವರಿಸಿಕೊಳ್ಳತೊಡಗಿತು.

ಬಸ್‌ ಒಂದೇ ಹದದಲ್ಲಿ ಓಡುತ್ತಲೇ ಇತ್ತು.

- ಚಾಮರಾಜ ಸವಡಿ

(೨೦೦೨ ಜನವರಿಯಲ್ಲಿ ಬರೆದಿದ್ದು)





ಕುವೆಂಪು ಜೊತೆ ಕಂಪ್ಯೂಟರೂ ಬೇಕು!

23 05 2008

ಹೈಸ್ಕೂಲ್‌ನಲ್ಲಿರಬೇಕು!

ಒಂದು ಕಣ್ಣು ಮುಚ್ಚಿಕೊಂಡು ನೋಡಬೇಕಾದ ಸೂಕ್ಷ್ಮದರ್ಶಕ ಯಂತ್ರದ ಎದುರು ನಾವೆಲ್ಲ ಸಾಲಾಗಿ ನಿಂತಿದ್ದೆವು. ಎಲ್ಲರಿಗೂ ಕುತೂಹಲ. ಯಂತ್ರದ ಕಿಂಡಿಯಲ್ಲಿ ಕಣ್ಣಿಟ್ಟು ನೋಡುತ್ತಿದ್ದವರ ಬೆರಗನ್ನು ಆಸೆಯಿಂದ ಗಮನಿಸುತ್ತ, ಮುಂದೆ ನಿಂತವ ಸರಿಯದ್ದಕ್ಕೆ ಅಸಹನೆ ಪಟ್ಟುಕೊಳ್ಳುತ್ತ ನಮ್ಮ ಸರದಿಗಾಗಿ ಚಡಪಡಿಸುತ್ತಿದ್ದೆವು. ಕೊನೆಗೂ ನಮ್ಮ ಪಾಳಿ ಬಂದು, ಸೂಕ್ಷ್ಮದರ್ಶಕದ ಕಣ್ಣೊಳಗೆ ಇಣುಕಿ ನೋಡಿದಾಗ, ಗಾಜಿನ ಪಟ್ಟಿಯ ಮೇಲಿದ್ದ ನೀರ ಹನಿಯಲ್ಲಿ ಬಾಲ ಬೀಸಿಕೊಂಡು ಈಜುತ್ತಿದ್ದ ಪ್ಯಾರಮೀಸಿಯಂ ಏಕಾಣು ಜೀವಿಗಳು ಕಂಡವು. ಅಲ್ಲೆಲ್ಲೋ, ಮೂಲೆಯಲ್ಲಿ ಆಕಾರವಿಲ್ಲದ ಅಮೀಬಾ!

ಆ ರೋಮಾಂಚನ ಹೇಗೆ ಬಣ್ಣಿಸುವುದು?

ಬರಿಗಣ್ಣೀಗೆ ಕಾಣದ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಹಾಗೂ ಪ್ರಮಾಣ ದೊಡ್ಡದು ಎಂದು ಜೀವ ವಿಜ್ಞಾನ ಬೋಧಿಸುವ ಶಿಕ್ಷಕರು ಹೇಳಿದಾಗ ಬುರುಡೆ ಬಿಡುತ್ತಾರೆ ಎಂದೇ ಅಂದುಕೊಂಡಿದ್ದೆವು. ಚಿತ್ರವಿಚಿತ್ರ ಆಕಾರದ ಜೀವಿಗಳನ್ನು ಪಠ್ಯಪುಸ್ತಕದಲ್ಲಿ ನೋಡಿದಾಗ ಆಸಕ್ತಿ ಕೆರಳಿರಲಿಲ್ಲ. ಅವುಗಳನ್ನೇ ಯಥಾವತ್ತಾಗಿ ಬೋರ್ಡಿನ ಮೇಲೆ ಇಳಿಸಿ, ’ಇದು ಹೊರ ಪೊರೆ, ಇದು ಒಳ ಪೊರೆ, ಇದು ನ್ಯೂಕ್ಲಿಯಸ್‌, ಇದು ಸೈಟೋಪ್ಲಾಸಂ’ ಎಂದೆಲ್ಲ ನೀಡುತ್ತಿದ್ದ ವಿವರಣೆಗಳು ಬೇಸರ ತಂದಿದ್ದವು.

ಬಹುಶಃ ಶಿಕ್ಷಕರಿಗೂ ಇದು ಗೊತ್ತಾಯಿತು ಎಂದು ಕಾಣುತ್ತದೆ. ಮರುದಿನವೇ ಮೈಕ್ರೋಸ್ಕೋಪ್‌ ತರಿಸಿ, ನಮ್ಮೂರ ಅಳವಂಡಿಯ ಜಕ್ಕಂಬಾವಿಯ ಕೊಳೆ ನೀರನ್ನು ತಂದು, ಸ್ಲೈಡ್‌ ಮೇಲೆ ಒಂದು ಹನಿ ಸವರಿ, ಮೈಕ್ರೋಸ್ಕೋಪ್‌ ಅಡಿ ಇಟ್ಟು ನಮ್ಮನ್ನು ನೋಡಲು ಕರೆದರು.

ಕಂಡಿದ್ದು ಮಾತ್ರ ಅದ್ಭುತ ಲೋಕ

*****

ತಂತ್ರಜ್ಞಾನ ತರುವ ಸೊಗಸಿದು. ಕಣ್ಣಿಗೆ ಕಾಣುವುದೇ ಅಂತಿಮ ಎಂಬ ಭ್ರಮೆಯಲ್ಲಿ ಇರುವ ವ್ಯಕ್ತಿಗೆ, ಕಾಣದ ಜಗತ್ತನ್ನು ತೋರಿಸಿ ಅಚ್ಚರಿಪಡಿಸುವ ಸಾಮರ್ಥ್ಯ ತಂತ್ರಜ್ಞಾನ ಬಿಟ್ಟರೆ ಬಹುಶಃ ಅಧ್ಯಾತ್ಮಕ್ಕೆ ಮಾತ್ರ ಸಾಧ್ಯವೇನೋ. ಬೋರ್ಡ್‌, ಚಾಕ್‌ಪೀಸ್‌, ಇಕ್ಕಟ್ಟಾದ ತರಗತಿಯೊಳಗೇ ಒತ್ತೊತ್ತಾಗಿ ಕೂತು, ಶಿಕ್ಷಕರು ಹೇಳುವುದನ್ನೇ ನೋಟ್ಸ್‌ ಬರೆದುಕೊಳ್ಳುತ್ತ ಓದುವುದೇ ಕ್ರಮವಾಗಿದ್ದರೆ ಶಿಕ್ಷಣದಷ್ಟು ಬೇಸರದ ಸಂಗತಿ ಇನ್ನೊಂದಿಲ್ಲ.

ಈ ಕಾರಣಕ್ಕಾಗಿಯೇ ಸಾಮಾನ್ಯ ಸೂಕ್ಷ್ಮದರ್ಶಕದಂಥ ಯಂತ್ರವೂ ಕಲಿಕೆಯನ್ನು ಆಸಕ್ತಿಯ ವಿಷಯವಾಗಿಸುತ್ತದೆ. ಒಂದು ಸಾಮಾನ್ಯ ಗ್ಲೋಬ್‌ ಜಗತ್ತನ್ನು ಸುತ್ತಿಸುತ್ತದೆ. ಸೌರವ್ಹೂಹದ ಮಾದರಿ ಆಸಕ್ತಿಯನ್ನು ಅಂತರಿಕ್ಷದಾಚೆಗೆ ವಿಸ್ತರಿಸುತ್ತದೆ. ನಕಾಶೆಗಳು, ಗಣಿತದ ಚಿತ್ರವಿಚಿತ್ರ ಮಾದರಿಗಳು, ಪ್ರಯೋಗಾಲಯದಲ್ಲಿ ನೀರಲ್ಲಿಟ್ಟ ಬಿಳಿ ಗಂಧಕ ಗಾಳಿಯ ಸಂಪರ್ಕಕ್ಕೆ ಬಂದೊಡನೇ ಉರಿಯುವುದು, ಲಿಟ್ಮಸ್‌ ಹಾಳೆ ಬಣ್ಣ ಬದಲಿಸುವುದು, ಒಂದು ನಿರ್ದಿಷ್ಟ ಪ್ರಮಾಣಕ್ಕೆ ಪ್ರಣಾಳದಲ್ಲಿರುವ ದ್ರವ ಗುಲಾಬಿ ಬಣ್ಣಕ್ಕೆ ತಿರುಗುವುದು, ಹರಳುಗಳು ಬೆಳೆಯುವುದು, ಜೀವ ವಿಜ್ಞಾನ ವಿಭಾಗದಲ್ಲಿ, ಫಾರ್ಮಾಲ್ಡಿಹೈಡ್‌ ದ್ರಾವಣದಲ್ಲಿ ಮುಳುಗಿಸಿಟ್ಟ ಚಿತ್ರ ವಿಚಿತ್ರ ಜೀವಿಗಳು, ಅವುಗಳ ವಿಚಿತ್ರ ವೈಜ್ಞಾನಿಕ ಹೆಸರುಗಳು ಹೊಸ ಲೋಕವನ್ನೇ ತೆರೆದಿಡುತ್ತವೆ.

ಇನ್ನು, ಇಂಥ ಸಣ್ಣಪುಟ್ಟ ಚೋದ್ಯಗಳಿಗೆ ಕಂಪ್ಯೂಟರ್‌, ಜೈವಿಕ ತಂತ್ರಜ್ಞಾನ, ಆನಿಮೇಶನ್‌ನಂಥ ಇತ್ತೀಚಿನ ಮಹತ್ವದ ಸಂಶೋಧನೆಗಳ ಪ್ರವೇಶವಾದರೆ ಕಲಿಕೆ ಹೇಗಿರಬಹುದು?

ಊಹಿಸಿಕೊಂಡರೇ ರೋಮಾಂಚನವಾಗುತ್ತದೆ.

ನಿಜ. ಕಲಿಕೆ ಇವತ್ತು ಪೂರ್ತಿಯಾಗಿ ಬದಲಾಗುತ್ತಿದೆ. ಕೇವಲ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್‌ ಎಂದರೆ ಕಣ್ಕಣ್ಣು ಬಿಡುತ್ತಿದ್ದ ನಾವೆಲ್ಲ ಇವತ್ತು ಬದುಕಿಗೆ ಅದನ್ನೇ ಅವಲಂಬಿಸಿದ್ದೇವೆ. ಪತ್ರಿಕೋದ್ಯಮದಲ್ಲಿರುವ ನಮಗೆ ಸುದ್ದಿಗಳು ಬರುವುದು, ಹೋಗುವುದು, ಗುಲ್ಲೆಬ್ಬಿಸುವುದು, ಮೆಚ್ಚುಗೆ, ವಿರೋಧ, ಭಿನ್ನಾಭಿಪ್ರಾಯ, ಬೆಳವಣಿಗೆ ಹುಟ್ಟಿಸುವುದೇ ಕಂಪ್ಯೂಟರ್‌ನಿಂದ. ಲೇಖನ ಬರೆಯಲು ಬೇಕಾದ ಪೂರಕ ಸಾಮಾಗ್ರಿ ಹುಡುಕಿಕೊಂಡು ಪತ್ರಕರ್ತರ್ಯಾರೂ ಗ್ರಂಥಾಲಯಗಳಿಗೆ ಹೋಗುವುದಿಲ್ಲ. ಅಥವಾ, ಆ ಪರಿ ಬೆಳೆಯುತ್ತಿರುವ ವಿವಿಧ ಮಜಲುಗಳ ಸಾಮಾಗ್ರಿಗಳನ್ನೆಲ್ಲ ತಂದಿಡಲು ಗ್ರಂಥಾಲಯದಲ್ಲಿ ಜಾಗವೂ ಸಾಕಾಗುವುದಿಲ್ಲ.

ಹೀಗಾಗಿ, ಅಂತರ್ಜಾಲ (ಇಂಟರ್‌ನೆಟ್‌) ನಮ್ಮ ಅನಿವಾರ್ಯ ಅಂಗವಾಗಿದೆ. ಅತ್ಯುತ್ತಮ ಗೆಳೆಯನೂ ಆಗಿದೆ. ಅಲ್ಲಿ ಸಿಗದಿರುವ ವಿಷಯಗಳೇ ಇಲ್ಲ. ಏನೋ ಹುಡುಕಲು ಹೋಗಿ ಇನ್ಯಾವುದೇ ಸಂಗತಿ ಗೋಚರಿಸುತ್ತದೆ. ಅದರ ಹಿಂದೆ ಹೊರಟು ಇನ್ನೆಲ್ಲೋ ತಲುಪುತ್ತೇವೆ. ಕ್ಷಣಕ್ಷಣಕ್ಕೂ ಅಚ್ಚರಿಪಡುತ್ತ, ಕೈಗೆ ಸಿಕ್ಕ ವಿಷಯವನ್ನು ಕನ್ನಡಕ್ಕೆ ಆಕರ್ಷಕವಾಗಿ ಇಳಿಸುವುದು ಹೇಗೆಂದು ಯೋಚಿಸುತ್ತ, ಆ ದಿಕ್ಕಿನಲ್ಲಿ ಯತ್ನಿಸುತ್ತ, ನಾವೂ ಬೆಳೆಯುತ್ತಲೇ ಇದ್ದೇವೆ. ತಂತ್ರಜ್ಞಾನದ ಅಪಾರ ಸಾಧ್ಯತೆಗಳು ಓದು ಮುಗಿದ ನಂತರವೂ ನಮ್ಮನ್ನು ವಿದ್ಯಾರ್ಥಿಯಾಗಿಸಿವೆ. ಬರೆಯುವುದನ್ನೇ ಬದುಕಾಗಿಸಿಕೊಂಡ ನಮ್ಮನ್ನು ಓದಲು ಹಚ್ಚಿವೆ.

*****

ಕಲಿಕೆ ಇವತ್ತು ಹೈಟೆಕ್‌ ಆಗಿದೆ.

ಹಾಗೆ ಆಗಬೇಕಾಗಿರುವುದು ಅನಿವಾರ್ಯವೂ ಹೌದು. ಪೈಥಾಗೊರಸ್‌ನ ಪ್ರಮೇಯ ಕಲಿಯಲು ಗ್ರಾಫಿಕ್ಸ್‌ಗಳ ನೆರವು ದೊರೆತಿದೆ. ಸೌರವ್ಯೂಹ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಆನಿಮೇಶನ್‌ ಇದೆ. ನಿಮ್ಮ ಗುಂಡುಪಿನ್ನಿನ ಮೊನೆ ಹೆಬ್ಬರಳಿನಷ್ಟು ಅಗಲವಾಗಿ, ಅದರ ಮೇಲೆ ಕೂತ ಬ್ಯಾಕ್ಟೀರಿಯಾಗಳನ್ನು ನೋಡಬೇಕೆಂದರೆ ಎಲೆಕ್ಟ್ರಾನಿಕ್‌ ಸೂಕ್ಷ್ಮದರ್ಶಕ ಯಂತ್ರ ಇದೆ. ಮನುಷ್ಯ ಮಾತ್ರದವರು ಮುಳುಗಲು ಸಾಧ್ಯವಾಗದ ಸಾಗರ ತಳದ ಅಚ್ಚರಿಗಳನ್ನು ಹೆಕ್ಕಿ ತರಲು ರೋಬಾಟ್‌ಗಳು ಬಂದಿವೆ. ಕಲಿಕೆ ಈಗ ತರಗತಿಗಳ ನಾಲ್ಕು ಗೋಡೆ ದಾಟಿ ದಾಂಗುಡಿಯಿಟ್ಟಿದೆ.

ಹೀಗಾಗಿ, ಶಿಕ್ಷಣ ಕ್ಷೇತ್ರದ ಸಾಧ್ಯತೆಗಳು ಮೊದಲಿಗಿಂತ ವಿಸ್ತಾರವಾಗುತ್ತ ನಡೆದಿವೆ. ಹಿಂದಿನಂತೆ ಊರಲ್ಲಿಯ ಹೈಸ್ಕೂಲ್‌ನಲ್ಲಿ ಓದಿ, ಪಕ್ಕದ ದೊಡ್ಡ ಊರಲ್ಲಿ ಕಾಲೇಜ್‌, ನಗರದಲ್ಲಿ ಡಿಗ್ರಿ ಮುಗಿಸಿ ನಿರುದ್ಯೋಗಿಯಾಗಿ ಊರಿಗೆ ಮರಳುವ ಪ್ರಮೇಯ ಈಗಿಲ್ಲ. ಪಿಯುಸಿ ಎಂದರೆ ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌ ಎಂಬ ಸಿದ್ಧ ಮಾದರಿಯ ಕಾಲ ಹೋಯಿತು. ಪಿಯುಸಿಗೆ ಸೇರುವಾಗಲೇ ಆದ್ಯತೆ ಸ್ಪಷ್ಟವಾಗಿರುತ್ತದೆ. ಮುಂದೆ ಎಂಜನಿಯರಿಂಗ್‌ ಹೋಗಬೇಕೆ? ಡಾಕ್ಟರ್‌ ಆಗಬೇಕೆ? ಪಶುವೈದ್ಯ ಕೋರ್ಸ್‌ ಹೇಗೆ? ಅಥವಾ ಸಾಫ್ಟ್‌ವೇರ್‌ ಎಂಜನಿಯರ್‌ ಆದರೆ ಹೇಗೆ? ಎಂಬೆಲ್ಲ ವಿಷಯಗಳನ್ನು ಗಮನಿಸಿಯೇ ಸೈನ್ಸ್‌ ತೆಗೆದುಕೊಳ್ಳುತ್ತಾರೆ. ಕಾಮರ್ಸ್‌ ಆದರೆ ಸಿ.ಎ. ಅಥವಾ ದೊಡ್ಡ ಕಂಪನಿಗಳಲ್ಲಿ ಅಕೌಂಟ್ಸ್‌ ಆಫೀಸರ್‌ ಆಗಲು ಬೇಕಾದ ವಿಷಯಗಳನ್ನೇ ಒತ್ತು ಕೊಟ್ಟು ಕಲಿಯಬೇಕು ಎಂಬ ಬೀಜ ಮೊಳಕೆಯೊಡೆದಿರುತ್ತದೆ. ಆರ್ಟ್ಸ್‌ ತೆಗೆದುಕೊಳ್ಳುವವರು ಎಲ್‌ಎಲ್‌ಬಿ, ಕೆಎಎಸ್‌ ಅಥವಾ ಐಎಎಸ್‌ ಕನಸು ಹೊತ್ತೇ ಅಡ್ಮಿಶನ್‌ ಪಡೆದಿರುತ್ತಾರೆ. ಕೊನೆಗೆ ಏನಿಲ್ಲವೆಂದರೂ, ಡಿ.ಇಡಿ., ಮುಂದೆ ಬಿ.ಇಡಿ. ಇದೆ ಎಂಬ ನಿರಾಳತೆ.

ಇಂಥ ಎಲ್ಲ ಬೆಳವಣಿಗೆಗಳ ಹಿಂದೆ ತಂತ್ರಜ್ಞಾನ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ನಿಮಗೆ ಒಂದು ವಿಷಯ ಹೇಳಿದರೆ ಅಚ್ಚರಿಯಾಗಬಹುದು. ಇವತ್ತು ಬೆಂಗಳೂರಿನ ಬಿಪಿಒ (ಹೊರಗುತ್ತಿಗೆ) ಕಂಪನಿಗಳಲ್ಲಿ ಕೆಲಸಕ್ಕಿರುವ ಶೇ.೭೦ರಿಂದ ೮೦ರಷ್ಟು ಉದ್ಯೋಗಿಗಳು ಎಂಜನಿಯರ್‌ಗಳೂ ಅಲ್ಲ, ವೈದ್ಯಕೀಯ ಓದಿದವರೂ ಅಲ್ಲ. ಅವರೆಲ್ಲ ಕೇವಲ ಬಿ.ಎ., ಬಿ.ಕಾಂ. ಓದಿದವರು. ಆದರೆ, ಬರೀ ಬಿ.ಎ. ಓದಿದರೆ ನೌಕರಿಯ ಮಾತಿರಲಿ, ಹಳ್ಳಿಯ ಬಸ್‌ಸ್ಟ್ಯಾಂಡ್‌ನ ಚಾದಂಗಡಿಯಲ್ಲಿ ಉದ್ರಿ ಕೂಡ ಹುಟ್ಟುವುದಿಲ್ಲ ಎಂಬ ಸತ್ಯದರ್ಶನ ಆಗಿರುವುದರಿಂದ, ಅವರೆಲ್ಲ ಕಂಪ್ಯೂಟರ್‌ ಕೋರ್ಸ್‌ ಮಾಡಿದರು. ನೌಕರಿ ಬೇಕೆಂದರೆ ಇಂಗ್ಲಿಷ್‌ ಗೊತ್ತಿರಬೇಕಿರುವುದು ಕಡ್ಡಾಯವಾಗಿದ್ದರಿಂದ ಮೂರು ತಿಂಗಳ ಸ್ಪೋಕನ್‌ ಇಂಗ್ಲಿಷ್‌ ತರಗತಿ ಮುಗಿಸಿ ಹೊರಬರುವ ಹೊತ್ತಿಗೆ ಆತ್ಮವಿಶ್ವಾಸ ಕುದುರಿತ್ತು. ಬಹುರಾಷ್ಟ್ರೀಯ ಬಿಪಿಒ ಕಂಪನಿಗಳು ಕೈಬೀಸಿ ಕರೆದವು. ಅವಕ್ಕೆ ಬೇಕಾದ ಕನಿಷ್ಠ ಅರ್ಹತೆಯನ್ನು ಗಳಿಸಿದ್ದರಾದ್ದರಿಂದ ನೌಕರಿಯೂ ಸಿಕ್ಕಿತು.

ಇಂಥದೇ ಮನಃಸ್ಥಿತಿ ಇತರ ಕೋರ್ಸ್‌‌ಗಳಲ್ಲಿಯೂ ಕಾಣಿಸಿಕೊಂಡಿದೆ. ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿರುವುದರಿಂದ ಅದರ ಅಗತ್ಯ ಪೂರೈಸಲು ವಿಶೇಷ ತರಬೇತಿ ಹೊಂದಿದ ಮೆದುಳುಗಳ ಅವಶ್ಯಕತೆ ಇದೆ. ಈಗಂತೂ ಹೊಸ ಹೊಸ ರೋಗಗಳು ಬಂದಿವೆ. ಹಳೆಯ ಔಷಧಿ ಅವಕ್ಕೆ ನಾಟುವುದಿಲ್ಲ. ಅಲ್ಲೆಲ್ಲೋ ನಾಟಿ ಔಷಧಿಯೊಂದು ಕೆಲಸ ಮಾಡುತ್ತಿದೆ ಎಂಬ ಸುದ್ದಿ ಬರುತ್ತದೆ. ಅದರ ಮೇಲೆ ಸಂಶೋಧನೆ ಆಗಬೇಕು. ಅಲ್ಲಿಗೆ ಬಯೋಟೆಕ್ನಾಲಜಿಯ (ಜೈವಿಕ ತಂತ್ರಜ್ಞಾನ) ಪ್ರವೇಶವಾಗುತ್ತದೆ.

ತುಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮೆದುಳಿನ ಒಳಮೂಲೆಯ ಎಲ್ಲೋ ರಕ್ತ ಗಡ್ಡೆಕಟ್ಟಿದೆ. ತಲೆಬುರುಡೆ ಕೊರೆದು, ಹೆಪ್ಪುಗಟ್ಟಿದ ರಕ್ತ ಹೀರಬೇಕು. ಅದಕ್ಕೆ ವಿಶೇಷ ಉಪಕರಣಗಳೂ, ತಂತ್ರಜ್ಞಾನವೂ ಬೇಕು. ಅಲ್ಲಿ ನ್ಯಾನೋ ಟೆಕ್ನಾಲಜಿಯ (ಅತಿ ಸೂಕ್ಷ್ಮ ತಂತ್ರಜ್ಞಾನ) ಪ್ರವೇಶ ಅನಿವಾರ್ಯ.

ಹುಟ್ಟುವ ಹತ್ತು ಮಕ್ಕಳಲ್ಲಿ ಒಂದು ಮಗು ನರಸಂಬಂಧಿ ರೋಗಗಳಿಂದ ಬಳಲುತ್ತದೆ ಎಂಬುದು ಆಘಾತಕಾರಿಯಾದ ಅಂಶ. ಆಹಾರದಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಯೂ ಇದಕ್ಕೆ ಕಾರಣವಾಗಿರಬಹುದು. ಗರ್ಭಧಾರಣೆಯಲ್ಲಿ ಉಂಟಾಗುವ ಕೋಶ ವಿಭಜನೆಯಲ್ಲಿ ಪುರುಷ ಹಾಗೂ ಸ್ತ್ರೀಯ ವಂಶವಾಹಿನಿಗಳಲ್ಲಿರುವ ಜೀನ್‌ಗಳು ಜೋಡಣೆಯಾಗುವಾಗ ಯಾವುದೋ ಒಂದು ಜೀನ್‌, ಯಾವ ಕಾರಣಕ್ಕೋ ಏನೋ, ತನ್ನ ಜಾಗದಿಂದ ನೆಗೆದು ಇನ್ನೆಲ್ಲೋ ಕೂತುಬಿಡುತ್ತದೆ. ಇದರಿಂದಾಗಿ ಹುಟ್ಟುವ ಮಗುವಿನಲ್ಲಿ ಬುದ್ಧಿಮಾಂದ್ಯವೋ, ಆಟಿಸಮ್ಮೋ ಕಾಣಿಸಿಕೊಳ್ಳುತ್ತದೆ. ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಈ ಸಮಸ್ಯೆ ಸಾಕಷ್ಟು ಬೆಳೆದಿದೆ. ಇದಕ್ಕೆಲ್ಲ ದೊಡ್ಡ ಪ್ರಮಾಣದ ಸಂಶೋಧನೆಗಳಾಗಬೇಕು. ಹೊಸ ಹೊಸ ಚಿಕಿತ್ಸಾ ಕ್ರಮಗಳು ಬರಬೇಕು. ಅವಕ್ಕೆಲ್ಲ ಹೊಸ ತಂತ್ರಜ್ಞಾನ ಬೇಕೇ ಬೇಕು.

ಹೀಗಾಗಿ ನಾವೆಲ್ಲ ಮತ್ತೆ ಹೊರಳುವುದು ಹಳ್ಳಿಯ ಮೂಲೆಗಳಲ್ಲಿರುವ ಇಕ್ಕಟ್ಟಾದ ತರಗತಿಗಳತ್ತಲೇ. ಅಲ್ಲಿರುವ ಉತ್ಸಾಹಿ, ಎಳೆ ಮನಸ್ಸುಗಳಿಗೆ ತಂತ್ರಜ್ಞಾನದ ನೆರವು ದೊರಕಿಸಬೇಕಿದೆ. ಕಲಿಕೆ ಆಕರ್ಷಕವಾಗಲು, ವೇಗವಾಗಲು, ಪರಿಣಾಮಕಾರಿಯಾಗಲು ಕುವೆಂಪು ಜೊತೆಗೆ ಕಂಪ್ಯೂಟರುಗಳೂ ಬೇಕು. ಅವನ್ನು ಬಳಸಲು ಗೊತ್ತಿರುವ, ಕಲಿಸಲು ಆಸಕ್ತರಾದ ಶಿಕ್ಷಕರೂ ಬೇಕು. ಹೈಸ್ಕೂಲ್‌ನಲ್ಲಿ ಮೈಕ್ರೋಸ್ಕೋಪ್‌ ಬಳಸಲು ಗೊತ್ತಿರುವ ವಿದ್ಯಾರ್ಥಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಮೈಕ್ರೋಸ್ಕೋಪ್‌ ಕಂಡಾಗ ಅಳುಕುವುದಿಲ್ಲ. ಹೈಸ್ಕೂಲ್‌ನಲ್ಲಿಯೇ ಕಂಪ್ಯೂಟರ್‌ ಬಳಸುವುದನ್ನು ಗೊತ್ತು ಮಾಡಿಕೊಂಡಿರುವ ವಿದ್ಯಾರ್ಥಿನಿ, ಸಾಫ್ಟ್‌ವೇರ್‌ ರೂಪಿಸುವಾಗ ಗೊಂದಲಗೊಳ್ಳುವುದಿಲ್ಲ. ತುಳಿದ ಹಾದಿ ಹಳೆಯದಾದಷ್ಟೂ ವೇಗವಾಗಿ ಹೊಸ ಹಾದಿ ನಮಗಾಗಿ ತೆರೆದುಕೊಳ್ಳುತ್ತ ಸಾಗುತ್ತದೆ.

ಆದರೆ, ಎಲ್ಲಿಯವರೆಗೆ ನಮ್ಮ ಶಿಕ್ಷಕರು ಪಠ್ಯಪುಸ್ತಕಗಳನ್ನಷ್ಟೇ ಬೋಧನೆಯ ಆಕರಗಳನ್ನಾಗಿ ಮಾಡಿಕೊಂಡಿರುತ್ತಾರೆಯೋ, ಅಲ್ಲಿಯವರೆಗೆ ಮಕ್ಕಳ ಮನಸ್ಸುಗಳಲ್ಲಿ ಅವರು ಕ್ರಿಯಾಶೀಲತೆ ತುಂಬಲಾರರು. ವಿಜ್ಞಾನದ ಶಿಕ್ಷಕನಿಗೆ ಕೊಂಚ ತಂತ್ರಜ್ಞಾನವೂ ಗೊತ್ತಿರಬೇಕು. ಕನ್ನಡ ಪಂಡಿತರಿಗೆ ಷೇಕ್ಸ್‌ಪಿಯರ್‌ ಗೊತ್ತಿದ್ದರೆ ಅನುಕೂಲವೇ ಅಲ್ಲವೆ? ಗಣಿತ ಮೇಷ್ಟ್ರರಿಗೆ ಕ್ಯಾಲ್ಕುಲೇಟರ್‌ ಬಳಸುವುದೂ ಗೊತ್ತಿಲ್ಲ ಎಂದರೆ ಹೇಗೆ? ನಮ್ಮ ದಿಗಂತಗಳು ವಿಸ್ತಾರವಾದರೆ ತಾನೆ ನಮ್ಮ ಮಕ್ಕಳು ಹೊಸ ದಿಗಂತ ಕಾಣುವುದು?

ತಂತ್ರಜ್ಞಾನ ಎಂಬುದೊಂದು ಓಡುವ ಕುದುರೆ. ನಾವೆಲ್ಲ ಅಶ್ವಾರೋಹಿಗಳು. ಸಣ್ಣ ವಯಸ್ಸಿನಲ್ಲಿಯೇ ಕುದುರೆಯನ್ನು ಕೊಂಚ ಮುಟ್ಟಿದರೆ, ಅದರ ಸಂಪರ್ಕ ಬಂದರೆ, ಬೆಳೆಯುತ್ತ ಹೋದಂತೆ ನಾವೇ ಅದನ್ನು ಪಳಗಿಸುತ್ತೇವೆ. ನಮಗೆ ಬೇಕೆನ್ನಿಸಿದ ಕಡೆ, ಬೇಕಾದ ಹಾಗೆ ಅದನ್ನು ಓಡಿಸುವುದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಸವಾರಿ ಗೊತ್ತಿರದವರನ್ನು ದಾರಿಯಲ್ಲೇ ಕೆಡುವುವ ಕುದುರೆ ತನ್ನ ಪಾಡಿಗೆ ತಾನು ಓಡುತ್ತ ಹೋಗುತ್ತದೆ.

ಹಾಗಾಗಬಾರದಲ್ಲವೆ?

- ಚಾಮರಾಜ ಸವಡಿ





ನಿರಕ್ಷರಿ ಕವಿಯ ಅಕ್ಷರಗಾಥೆ

23 05 2008

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.

ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.

ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್‌ಬುಕ್‌ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.

ಕ್ರಮೇಣ ನೋಟ್‌ಬುಕ್‌ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.

ಅಲ್ಲಿಂದ ಹೊಳೆ ಸಾಲಿನ ಈ ಕವಿತಾ ಹೋರಿ ನಮ್ಮ ಷೇರುಮಾರುಕಟ್ಟೆಯ ಗೂಳಿಗಿಂತ ಜೋರಾಗಿ, ಹಳಿ ತಪ್ಪದಂತೆ ಓಡುತ್ತಲೇ ಇದೆ. ಕಳೆದ ೧೭ ವರ್ಷಗಳಲ್ಲಿ ೧೬ ಪುಸ್ತಕಗಳನ್ನು ಪ್ರಕಟಿಸಿದ್ದಾನೆ ಈತ. ಇವುಗಳಲ್ಲಿ ಕವನ ಸಂಕಲನಗಳೇ ಹೆಚ್ಚು. ಈಗ ತಾನೆ ೧೭ನೇ ಕೃತಿ ’ಕೂಸಿನ ಕನಸು’ ಅಚ್ಚಿನಲ್ಲಿದೆ.

ಕವಿತೆಗಳನ್ನು ನೆನಪಿಟ್ಟಷ್ಟು ಸುಲಭವಾಗಿ ಅಚ್ಚಾದ ತನ್ನ ಎಲ್ಲ ಕವನ ಸಂಕಲನಗಳ ಶೀರ್ಷಿಕೆಗಳು ಸಿದ್ದಪ್ಪನಿಗೆ ನೆನಪಿಲ್ಲ. ’ಪುಸ್ತಕಾನ ಬಂದ ಮ್ಯಾಲ ಅದರ ಹೆಸರು ತಗೊಂಡು ಏನು ಆಗಬೇಕಾಗೈತಿ?’ ಎಂಬ ನಿರ್ಲಕ್ಷ್ಯ ಆತನದು. ಆದರೆ, ಯಾವುದಾದರೂ ವಿಷಯ ಹೇಳಿ, ’ಇದರ ಮ್ಯಾಗ ಕವಿತಾ ಬರ್ದೀಯೆನು?’ ಎಂದು ಕೇಳಿದರೆ, ಥಟ್ಟಂತ ಪೂರ್ತಿ ಕವಿತೆ ಹಾಡುತ್ತಾನೆ.

’ಕವಿತಾ ಹ್ಯಾಂಗಿರಬೇಕು ಸಿದ್ದಪ್ಪ?’ ಎಂದು ಕೇಳಿ ನೋಡಿ?

ಕವಿ ಅಂದರ ಇರಬೇಕ ಹೆಂಗೋ
ಕೈಕಾಲು ಬಿಚ್ಚಿ ಕೂಸ ಆಡಿದಂಗೋ
ಕಟ್ಟಿದ ಕವಿತಾ ಹ್ಯಾಂಗಿರಬೇಕೋ
ಬೆಳಗ ಸೂರ್ಯನ ಹೊಳಪಿರಬೇಕೋ

ತಾಯಿ ಮಾರಿ ನೋಡಿ ಕೂಸ ನಕ್ಕಂಗ
ತೋರಿ ಆಕಳಗಿ ಕರಾ ಬಿಟ್ಟಾಂಗ
ತಿಪ್ಪಿ ಕೆದರಿ ಮೇದಂಗ ಕೋಳಿ
ಖುಷಿ ಆಗಬೇಕು ಕವಿತಾ ಕೇಳಿ

ಹಸದ ಹೊಟ್ಟೀಗಿ ಹಾಕಿದಂಗ ಅನ್ನ
ಹರದ ತಿಂದಂಗ ಮಾಗೀದ ಹಣ್ಣ
ಮಗ್ಗಿ ಅರಳಿದಂಗ ಗಿಡದಾನ ಹೂವಾ
ಕವಿತಾ ಕೇಳಿ ಕರಗಬೇಕೋ ಜೀವಾ

ಹೂಡಿ ಹೊಡದಂಗ ಜೋಡೆತ್ತಿನ ಗಾಡಿ
ಹಾಡೀಗಿ ಕೊಡಬೇಕ ಶಬ್ದದ ಜೋಡಿ
ಕವಿತಾಕ ಒಂದು ಇರಬೇಕೋ ಅರ್ಥ
ಮನಸಿನ ಹಸಿಯಾ ಹೆಜ್ಜೇಯ ಗುರ್ತಾ

(ಕವಿ ಹೆಜ್ಜೆ)

ಎಂದು ಪೂರ್ತಿ ಕವಿತೆ ಹಾಡಿಬಿಡುತ್ತಾನೆ.

ಸಿದ್ದಪ್ಪ ತನ್ನ ಕವಿತೆಗಳನ್ನು ಎಂದೂ ಓದುವುದಿಲ್ಲ. ಏಕೆಂದರೆ ಆತನಿಗೆ ಓದಲು ಬರುವುದಿಲ್ಲ. ಆದರೆ, ಹಾಡುತ್ತಾನೆ. ಅಚ್ಚ ಕಂಚಿನ ಕಂಠದಲ್ಲಿ, ಬಿಗಿ ಎಳೆಯುವ ಧ್ವನಿಯಲ್ಲಿ ದೊಡ್ಡದಾಗಿ ಹಾಡುತ್ತಾನೆ. ಹಾಡುತ್ತ, ಹಾಡುತ್ತ ಕಣ್ಣರಳಿಸಿ ಖುಷಿಯಾಗುತ್ತಾನೆ. ’ಸಿದ್ಧೇಶ್ವರ ಸ್ವಾಮ್ಯಾರು ಈ ಕವಿತಾ ಕೇಳಿ ಖುಷಿಪಟ್ರು’ ಎಂದು ಆನಂದ ಪಡುತ್ತಾನೆ. ತನ್ನ ಕವಿತೆಯಲ್ಲಿ ತಾನೇ ಲೀನವಾಗುತ್ತಾನೆ.

ಸಿದ್ದಪ್ಪ ಬಿದರಿಯ ಕವಿತೆಗಳನ್ನು ಹೆಂಗರುಳಿನ ಕವಿ ಚೆನ್ನವೀರ ಕಣವಿ ಕೇಳಿ ಮೆಚ್ಚಿದ್ದಾರೆ. ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಚಂದ್ರಶೇಖ ಕಂಬಾರ ಅವರಿಗಂತೂ ಸಿದ್ದಪ್ಪ ಜಾನಪದದ ಅಪ್ಪಟ ಅವತಾರ. ಯು.ಆರ್‌. ಅನಂತಮೂರ್ತಿ, ಸಾ.ಶಿ. ಮರುಳಯ್ಯ ಮುಂತಾದವರು ಈತನ ಕವಿತೆಗಳನ್ನು ಮೆಚ್ಚಿದ್ದಾರೆ. ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯಂತೂ, ’ಓದು ಬರಹಗಳಿಲ್ಲ, ಸಿರಿಯ ಬಲುಹುಗಳಿಲ್ಲ, ಛಂದೋ ವಿಧಾನಗಳನರಹುವ ಸ್ನೇಹಿಗಳಿಲ್ಲ, ಹಳ್ಳಿಯ ಪರಿಸರ, ನೆಲವ ನಂಬಿ ದುಡಿವ ಜನರ ಸಂಗ, ಕಥೆ ಗೀತೆಗಳನರಿಯದ ಗ್ರಾಮೀಣರ ಒಡನಾಟ, ಆದರೇನು? ಜಾನಪದ ಕವಿ ಸಿದ್ದಪ್ಪ ಬಿದರಿ ಅವರಿಗೆ ಶಾರದೆಯ ಒಲುಮೆ!’ ಎಂದು ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ.

ಒಮ್ಮೆ ಮನೆಗೆ ಬಂದಿದ್ದ ಧೋತರಧಾರಿ ಸಿದ್ದಪ್ಪನನ್ನು ಕಂಡು ಬಾಗಿಲಾಚೆಯೇ ನಿಲ್ಲಿಸಿ ಮಾತನಾಡಿಸಿದ್ದ ಕವಿ ನಿಸಾರ್‌ ಅಹ್ಮದ್‌ ಅವರಿಗೆ, ’ನಾನೂ ಕವಿ ಅದೀನ್ರೀ ಯಪ್ಪಾ’ ಎಂದವನೇ,

ಎಷ್ಟೋ ಜನ್ಮ ಹುಟ್ಟಿದರ ಕನ್ನಡ ಮಣ್ಣಾಗ ಇರತೀನಿ
ಸತ್ಯುಳ್ಳ ಶರಣರ ಮಾತಿನ ಸವಿ ಜೇನಾಗಿರತೀನಿ

ಕನ್ನಡಿಗರ ಮಸ್ತಕದೊಳಗ ಪುಸ್ತಕಾಗಿರತೀನಿ
ಕನ್ನಡಿಗರ ದೀಪದ ಬತ್ತಿ ಎಣ್ಯಾಗ ಪಣತ್ಯಾಗಿರತೀನಿ

ಕನ್ನಡಿಗರು ಹರಿದು ತಿನ್ನು ಗಿಡದ ಹಣ್ಣಾಗಿರತೀನಿ
ಕನ್ನಡಿಗರ ಎದಿಯಾಗ ಅರಳಿದ ಮಲ್ಲಿಗಿ ಹೂವಾಗಿರತೀನಿ

ಎಂದು ಪೂರ್ತಿ ಹಾಡು ಹೇಳಿಯೇಬಿಟ್ಟ. ಅವಾಕ್ಕಾದ ನಿಸಾರ ಅಹ್ಮದ ಈತನ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿ, ತಾವೇ ಬಾಳೆಹಣ್ಣು ಸುಲಿದು ತಿನ್ನಲು ಕೊಟ್ಟು, ಗಂಟೆಗಟ್ಟಲೇ ಮಾತಾಡಿ, ಆತನ ಹಾಡು ಕೇಳಿ ಸಂತಸಪಟ್ಟರಂತೆ. ಅವರ ಕಡೆಯಿಂದಲೂ ತನ್ನದೊಂದು ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಸಿಕೊಂಡಿದ್ದಾನೆ ಸಿದ್ದಪ್ಪ.

ಇಂತಹ ಆಶು ಕವಿ ಸಿದ್ದಪ್ಪ ದಸರಾ ಕವಿಗೋಷ್ಠಿಗಳೂ ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಚಾಲುಕ್ಯೋತ್ಸವ, ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ಹಾಡಿದ್ದಾನೆ. ಧಾರವಾಡ ಮತ್ತು ಮೈಸೂರು ಆಕಾಶವಾಣಿಗಳು ಈತನ ಸಂದರ್ಶನ ಪ್ರಸಾರ ಮಾಡಿವೆ. ಉದಯ ಟಿವಿ ಪರಿಚಯ ಸಂದರ್ಶನ ಪ್ರಸಾರ ಮಾಡಿದೆ. ರಾಜ್ಯದ ಹದಿಮೂರು ಕಡೆ ಈತನನ್ನು ಕರೆಸಿ ಸನ್ಮಾನಿಸಲಾಗಿದೆ. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ, ೨೦೦೩ರಲ್ಲಿ ಬಾಗಲಕೋಟೆ ಜಿಲ್ಲೆಯ ೯ನೇ ತರಗತಿಯ ವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ, ಸಿದ್ದಪ್ಪನ ಕುರಿತು ಗದ್ಯಭಾಗದ ಪ್ರಶ್ನೆ ಕೇಳಲಾಗಿದೆ.

ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ಸಿದ್ದಪ್ಪ, ಎಲ್ಲ ಮಕ್ಕಳಿಗೆ ಸಾಧ್ಯವಾದಷ್ಟೂ ವಿದ್ಯಾಭ್ಯಾಸ ಮಾಡಿಸಿದ್ದಾನೆ. ಈಗ ಆತನ ಕವಿತೆಗಳಿಗೆ ಮಕ್ಕಳೇ ಲಿಪಿಕಾರರು. ಹಾಡು ಹೇಳುತ್ತ, ಹೊಲದಲ್ಲಿ ದುಡಿಯುತ್ತ ಈ ಹಾಡುಹಕ್ಕಿ ಬೆಳೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಕವನ ಸಂಕಲನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ಸಿದ್ದಪ್ಪನ ಹಾಡು ಕೇಳಬೇಕೆಂದರೆ, ಬಾಗಲಕೋಟೆ ಜಿಲ್ಲೆ ಬಿಳಗಿಯ ಜನತಾ ಪ್ಲಾಟ್‌ಗೆ ಹೋಗಿ. ದೂರದಿಂದಲೇ ಹಾರೈಸಬೇಕೆಂದರೆ, ದೂರವಾಣಿ (ಪಿಪಿ) ೦೮೫೩೪-೪೭೬ ೦೧೪ಗೆ ಕರೆ ಮಾಡಿ.

- ಚಾಮರಾಜ ಸವಡಿ Read the rest of this entry »





ಕೊಡೆಯೊಂದಿಗೆ ಅರಳುವ ನೆನಪುಗಳು

23 05 2008

ಧಾರವಾಡಕ್ಕೆ ಬಾರದೇ ನೀವೆಲ್ಲ ಎಲ್ಲಿ ಹೋಗಿದ್ದೀರಿ?

ಹಳೆಯ ಧಾರವಾಡವನ್ನು ನೆನಪಿಸುವಂತೆ ಇಲ್ಲಿ ಮುಂಗಾರು ಹದವಾಗಿ ಕುಟ್ಟತೊಡಗಿದೆ. ತಿಂಗಳುಗಟ್ಟಲೇ ಸೂರ್ಯನ ದರ್ಶನವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ದಟ್ಟ ಮರಗಿಡಗಳ ಮೇಲ್ಭಾಗದಲ್ಲಿ ಹಸಿರು ಹಾವಸೆ ತುಂಬಿಕೊಂಡು, ಹಾಡಹಗಲಲ್ಲೇ ತುಂಬಿರುವ ಕತ್ತಲೆಗೆ ಮಂಕು ಫ್ಲೋರೋಸೆಂಟ್‌ ಬೆಳಕಿನ ಪ್ರಭೆ. ಈಚೆಗೆ ಒಂದಿಷ್ಟು ರಸ್ತೆಗಳು ಡಾಂಬರ್‌ನ ಪುಣ್ಯ ಕಂಡಿವೆ. ಹೀಗಾಗಿ, ನೀನು ಕಪ್ಪೋ, ನಾನು ಕಪ್ಪೋ ಎಂಬಂತೆ ಮುಂಗಾರು ಮೋಡಗಳು ರಸ್ತೆ ಬಣ್ಣದ ಜೊತೆ ಸ್ಪರ್ಧೆಗೆ ಇಳಿಯುತ್ತವೆ. ಆಗೆಲ್ಲ ಕ್ಯಾಂಪಸ್ ತುಂಬ ಭರ್ಜರಿ ಮಳೆ.

ನೋಡಬೇಕಾದ ನೀವೇ ಇನ್ನೂ ಬಂದಿಲ್ಲ!

ಈಗಂತೂ ಕ್ಯಾಂಪಸ್‌ ತುಂಬ ಕಾಣುವುದು, ಒಂದೋ ಉದ್ದನೆಯ ಸಾಲುಗಳು, ಇಲ್ಲವೇ ಅಲ್ಲಲ್ಲಿ ನಿಂತ ಗುಂಪುಗಳು. ಸಾಲುಗಳ ಕತೆ ನಿಮಗೆ ಗೊತ್ತೇ ಇದೆ. ಜಗತ್ತಿನ ಎಲ್ಲೆಡೆ ಕಂಪ್ಯೂಟರ್‌ ತಂತ್ರಜ್ಞಾನ ಬಂದಿರಬಹುದು. ಅದನ್ನು ಹಳ್ಳಿಗಳ ಜನ ಕೂಡ ಬಳಸುತ್ತಿರಬಹುದು. ಆದರೆ, ನಮ್ಮ ವಿಶ್ವವಿದ್ಯಾಲಯದ ಅಡ್ಮಿಶನ್‌ ಫಾರ್ಮ್‌ ಕೊಡುವುದರಿಂದ ಹಿಡಿದು ಫೀಸ್‌ ಕಟ್ಟಿಸಿಕೊಂಡು ಪ್ರವೇಶ ನೀಡುವವರೆಗೆ, ಎಲ್ಲ ವಿಧಾನವೂ ಓಬಿರಾಯನ ಕಾಲದ್ದೇ ಅಲ್ಲವೆ?

ಯಾವುದಾದರೂ ಕೋರ್ಸ್‌‌ಗೆ ಅರ್ಜಿ ಹಾಕಿದರೆ ಪ್ರವೇಶ ಸಿಕ್ಕಿಬಿಡುವ ಕಾಲವಲ್ಲ ಇದು. ಹೀಗಾಗಿ, ಎರಡು-ಮೂರು ಕೋರ್ಸ್‌‌ಗಳಿಗೆ ಅರ್ಜಿ ಹಾಕುವುದು ಸಾಮಾನ್ಯ ತಾನೆ? ಅದಕ್ಕಾಗಿ ನೀವು ಮೊದಲು ಬ್ಯಾಂಕ್‌ನಲ್ಲಿ ನಿಂತು ಚಲನ್‌ ತುಂಬಬೇಕು. ನಂತರ, ಅದನ್ನು ಪ್ರಸಾರಾಂಗಕ್ಕೆ ತಂದು ಅರ್ಜಿ ಪಡೆದುಕೊಳ್ಳಬೇಕು. ತುಂಬಿದ ಅರ್ಜಿಗೆ ಅಟೆಸ್ಟ್‌ ಮಾಡಿಸಿದ ಹತ್ತಾರು ದಾಖಲೆಗಳನ್ನು ಸೇರಿಸಬೇಕು. ಅಟೆಸ್ಟ್‌ ಮಾಡಿಸಲು ಗೆಜೆಟೆಡ್‌ ದರ್ಜೆಯ ದರ್ಪಿಷ್ಠರನ್ನು ಹುಡುಕಿಕೊಂಡು ಅಲೆಯಬೇಕು. ನೀವು ಪ್ರತಿಭಾವಂತರಾಗಿದ್ದರೂ ಸರಿ, ಇಡೀ ಜಗತ್ತಿಗೆ ತಂತ್ರಜ್ಞಾನ ಬಂದಿದ್ದರೇನಂತೆ? ನಮ್ಮ ವಿಶ್ವವಿದ್ಯಾಲಯಗಳು, ಅವುಗಳ ತಮ್ಮಂದಿರಾದ ಮಹಾವಿದ್ಯಾಲಯಗಳು, ಅವುಗಳ ಮರಿ ತಮ್ಮಂದಿರಾದ ಪದವಿಪೂರ್ವ ಕಾಲೇಜುಗಳು ಬದಲಾಗುವುದು ಅಷ್ಟು ಸುಲಭವಲ್ಲ. ಅವಕ್ಕೆ ಓಬಿರಾಯನೇ ಇಷ್ಟ.

ಹೋಗಲಿ ಬಿಡು, ಚೆಂದದ ಮುಂಗಾರು ಮಳೆಯ ಮುನ್ನುಡಿಗೆ ಓಬಿರಾಯನೇ ಮೊದಲ ಅಧ್ಯಾಯವಾಗುವುದು ಬೇಡ. ಈ ದರಿದ್ರ ಪ್ರವೇಶ ಪದ್ಧತಿಯನ್ನು ಮುಗಿಸಿದರೆ ಸಾಕು, ಓದು ಮುಗಿಯುವತನಕ ಧಾರವಾಡ ಅತಿ ಸುಂದರ. ಅದಕ್ಕೆಂದೇ ಅಲ್ಲವೆ ಈ ಊರಲ್ಲಿ ಕಲಿಯಬೇಕೆಂದು ನಾವು ನೀವೆಲ್ಲ ಹಂಬಲಿಸಿದ್ದು? ದೂರದ ಊರು ಎಂದು ಮನೆಯಲ್ಲಿ ಧಾವಂತ ಪಟ್ಟರೂ, ಮುಂಗಾರಿನೂರಿನ ಬಣ್ಣಬಣ್ಣದ ಹಸಿರಿನ ಕನಸುಗಳು ಕೈಬೀಸಿ ಕರೆದಿದ್ದು? ಅಲ್ಲಲ್ಲ, ಮೋಡಗಳ ಮೂಲಕ ಸಂದೇಶ ಕಳಿಸಿದ್ದು? ಹತ್ತಿರದ ಬಸ್‌ ರಸ್ತೆಯವರೆಗೆ ನಡೆದು ಬಂದು, ಅಲ್ಲಿಂದ ಟೆಂಪೋ ಹತ್ತಿ ಹತ್ತಿರದ ದೊಡ್ಡ ಊರಿಗೆ ಬಂದು, ಅಲ್ಲಿಂದ ಎರಡು ಬಸ್‌ಗಳನ್ನು ಬದಲಾಯಿಸಿದ ಮೇಲೆ ಅಲ್ಲವೆ ಹುಬ್ಬಳ್ಳಿ ಸಿಕ್ಕಿದ್ದು?

ಅಲ್ಲಿಂದ ಧಾರವಾಡಕ್ಕೆ ಮಾತ್ರ ಒಂದೇ ಬಸ್‌ ಸಾಕು. ನವಿಲೂರಿನ ಸೇತುವೆ ಇಳಿಯುತ್ತಲೇ ಇದ್ದಕ್ಕಿದ್ದಂತೇ ವಾತಾವರಣ ಬದಲಾಯಿಸಿಬಿಡುತ್ತದೆ, ಅಲ್ಲವೆ? ಕಾಂಕ್ರೀಟ್‌ನ ಹುಬ್ಬಳ್ಳಿ ಹಿಂದಾಗಿ, ಕಾಡಿನಂತಹ ಧಾರವಾಡ ಅರಳುತ್ತ ಹೋಗುತ್ತದೆ. ವಿದ್ಯಾಗಿರಿ ಪ್ರವೇಶಿಸುತ್ತಲೇ ಕನಸಿನ ಊರು ಬಂದ ಅನುಭವ.

ಇದಪ್ಪ ಧಾರವಾಡ! ಅದಕ್ಕೇ ಅಲ್ಲವೇ ಓದುವ ಹುಚ್ಚಿನ ಅಥವಾ ಪಕ್ಕಾ ಹುಚ್ಚು ಕೆರಳಿರುವ ಜನ ಇದನ್ನು ಹುಡುಕಿಕೊಂಡು ಅಷ್ಟು ದೂರದಿಂದ ಬರುವುದು? ವಿದ್ಯಾಗಿರಿಯಿಂದ ದಾರಿಯುದ್ದಕ್ಕೂ ಸಿಗುವ ಟ್ಯೂಷನ್‌ ಬೋರ್ಡ್‌‌ಗಳನ್ನು ಓದುತ್ತ ಸಾಗುವಷ್ಟೊತ್ತಿಗೆ ಸಿಬಿಟಿ ಬಂದುಬಿಡುತ್ತದೆ. ’ಕರ್ನಾಟಕ ವಿಶ್ವವಿದ್ಯಾಲಯ’ ಎಂದು ಕೆಟ್ಟ ಕಪ್ಪಕ್ಷರದ ಬೋರ್ಡ್‌ ಹೊತ್ತ ಕಾಫಿ ಬಣ್ಣದ ಬಸ್ಸೊಂದು ಮೂರ್ಛೆ ರೋಗಿ ಮುಲಗುಟ್ಟುವಂತೆ ಅದುರುತ್ತಿರುತ್ತದೆ. ಹೌದು ಮಾರಾಯಾ, ಇದು ನಿಜಕ್ಕೂ ಬಸ್ಸೇ. ರಸ್ತೆ ಕೊಚ್ಚೆ ಸಿಡಿದು ಬಣ್ಣ ಬದಲಾಗಿದೆಯಷ್ಟೇ. ಇನ್ನು ಬಸ್ಸೋ, ಅದೂ ಓಬಿರಾಯನ ಕಾಲದ್ದೇ ತಮ್ಮಾ. ಮುಟ್ಟುವ ಗ್ಯಾರಂಟಿಯಂತೂ ಉಂಟು. ಬೇಗ ಹತ್ತು. ಸೀಟಾದರೂ ಸಿಕ್ಕೀತು.

ಅಲ್ಲೆಲ್ಲೋ ನಿಂತು ಎಲೆಯಡಿಕೆ ಜಗಿಯುತ್ತಿದ್ದ ಡ್ರೈವರ್‌ ಎಂಬ ಆಸಾಮಿ ಯಾರೋ ಕರೆದರೆಂಬಂತೆ ಥಟ್ಟನೇ ಒಳ ಬಂದು ಅದುರುತ್ತಿರುವ ಬಸ್‌ನ ಆಕ್ಸಿಲೇಟರ್‌ ಅದುಮುತ್ತ ಏಕೋ ಹೊರಳಿ ನೋಡುತ್ತಾನೆ. ನಾವೇ ಅಲ್ಲವೇ ಅವನ ಕಣ್ಣಿಗೆ ಬೀಳುವುದು? ಇಷ್ಟು ದೊಡ್ಡ ಟ್ರಂಕ್‌, ಗೊಬ್ಬರ ಚೀಲದ ಒಂದಿಷ್ಟು ಲಗೇಜ್‌, ಸೂಕ್ಷ್ಮವಾಗಿ ಮೂಗೆಳೆದುಕೊಂಡರೆ ಘಮ್ಮೆಂದು ರಾಚುವ ಜೋಳದ ಬಿರುಸು ರೊಟ್ಟಿ, ಗುರೆಳ್ಳು ಚಟ್ನಿ ಪುಡಿಯ ಸುವಾಸನೆ ಬಲ್ಲ ಅವ, ’ಕ್ಯಾಂಪಸ್‌ಗೆ ಹೊಂಟಾರ’ ಎಂಬಂತೆ ನಕ್ಕು ಗೇರ್‌ ಬದಲಿಸುತ್ತಾನೆ. ಅದುವರೆಗೆ ಸಂಬಂಧವಿಲ್ಲದವರಂತೆ ಕೆಳಗೆ ನಿಂತಿದ್ದ ಜವಾರಿ ಮಂದಿ, ಸಿಕ್ಕಸಿಕ್ಕಲ್ಲೆಲ್ಲ ಎಲೆಯಡಿಕೆ ದ್ರಾವಣ ಉಗುಳಿ ಅವಸರದಿಂದ ಬಸ್‌ ಹತ್ತುತ್ತಾರೆ.

ನಿಮ್ಮ ಯುನಿವರ್ಸಿಟಿ ಪ್ರವಾಸ ಪ್ರಾರಂಭವಾಗಿದ್ದು ಹೀಗೆ ತಾನೆ?

ಅಷ್ಟೊತ್ತಿಗೆ ಮಳೆ ಪ್ರಾರಂಭವಾಗಿರುತ್ತದೆ. ಬೆಂಗಳೂರಿನಲ್ಲೀಗ ಸಂಜೆ ಐದರ ಮಳೆ ಅಪರೂಪ. ನಮ್ಮ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅದನ್ನು ನೋಡಬೇಕೆಂದರೂ ಧಾರವಾಡಕ್ಕೇ ಬರಬೇಕು. ಇದ್ದಕ್ಕಿದ್ದಂತೆ ಕವಿದುಕೊಂಡ ಮೋಡ, ಮಳೆಯಾಗಿ ರಪರಪ ಬೀಳತೊಡಗುತ್ತದೆ. ಧಾರವಾಡದಲ್ಲಿ ಇಂತಹ ಮಳೆಯಿಂದಾಗಿಯೇ ಬಸ್‌ಗಳು ರಾಡಿಯಾಗುವುದು ಹಾಗೂ ಇದ್ದ ರಾಡಿ ಕಳೆದುಕೊಂಡು ಸ್ವಚ್ಛವಾಗುವುದು. ಡ್ರೈವರ್‌ ಎಂಬ ಆಪತ್ಬಾಂಧವ ಬಸ್‌ ಅನ್ನು ಮಾರಿನಿಂದ ಮಾರಿಗೆ ನಿಲ್ಲಿಸುತ್ತ, ಎನ್ನ ಸಮಾನರಾರಿಹರು ಎಂಬಂತೆ ಒರಲುವ ಅದನ್ನು ಮರಗಳ ಹಸಿರು ಕತ್ತಲೆ ತುಂಬಿಕೊಂಡ ರಸ್ತೆಗಳೊಳಗಿಂದ ನುಗ್ಗಿಸುತ್ತ, ಜುಬಿಲಿ ಸರ್ಕಲ್‌, ಕೆಸಿಡಿ ಸರ್ಕಲ್‌, ಸಪ್ತಾಪುರ ಬಾವಿ, ಚೆನ್ನಬಸವನಗರ, ಶ್ರೀನಗರ ಸರ್ಕಲ್‌ನಲ್ಲಿ ಎಡಕ್ಕೆ ತಿರುಇ, ರೈಲ್ವೇ ಹಳಿ ದಾಟಿ ಒಳ ನುಗಿದನೆಂದರೆ-

ಅಗೋ ಬಂತು ಕರ್ನಾಟಕ ವಿಶ್ವವಿದ್ಯಾಲಯ!

ಇಲ್ಲೇ ಅಲ್ಲವೇನೋ ನಾವೆಲ್ಲ ಎರಡು ವರ್ಷ ಇದ್ದುದು? ಎಲ್ಲರೂ ಹೀಗೇ ಅಲ್ಲವಾ ಒಳಗೆ ಬಂದಿದ್ದು? ಏನೆಲ್ಲ ಅಂದುಕೊಂಡಿದ್ದ, ಅಂದುಕೊಂಡಿದ್ದಕ್ಕಿಂತ ಬೇರೇನೆಲ್ಲ ಆಗಿದ್ದ ಇಲ್ಲೇ ಅಲ್ಲವೇ ನಮ್ಮ ಬದುಕುಗಳು ಅರಳಿದ್ದು? ಟೊಂಗೆಗಳು ಕವಲೊಡೆದಿದ್ದು? ಮತ್ತು, ದೂರದ ಊರುಗಳಲ್ಲಿ ಅನ್ನ-ಆಶ್ರಯ ಅರಸಿಕೊಂಡು ಇಲ್ಲಿಂದ ಹೋಗಿದ್ದು? ಅದ್ಹೇಗೋ ನಾನೊಬ್ಬ ಮಾತ್ರ ಮರಳಿ ಇಲ್ಲಿಗೆ ಬಂದುಬಿಟ್ಟಿದ್ದೇನೆ. ಕ್ಯಾಂಪಸ್‌ನ ಹಸಿರು ಕತ್ತಲೆಯ ಜೊಂಪಿನಲ್ಲಿ, ಮಳೆ ಹನಿಗಳ ತಂಪಿನಲ್ಲಿ, ನಿಮ್ಮನ್ನೆಲ್ಲ ನೆನಪಿಸಿಕೊಳ್ಳುತ್ತ ಒಂಟಿಯಾಗಿಬಿಟ್ಟಿದ್ದೇನೆ.

ನಿಮ್ಮನ್ನೆಲ್ಲ ಹುಡುಕಿಕೊಂಡು ಮುಂಗಾರು ಆಗಲೇ ಇಲ್ಲಿ ಬಂದಾಯ್ತು. ಕ್ಯಾಂಪಸ್‌ ಕಾಯುತ್ತಿದೆ. ಹಸಿರು ಕಾಯುತ್ತಿದೆ. ನಿರ್ಜನ ಡಾಂಬರ್‌ ರಸ್ತೆಗಳು, ಶಾಲ್ಮಲಾ ಕಣಿವೆಯ ನವಿಲುಗಳು ಕಾಯುತ್ತಿವೆ. ನೀವು ಬರುವುದು ಯಾವಾಗ?

ತಡ ಮಾಡಬೇಡಿ. ಬೇಗ ಬಂದುಬಿಡಿ.

- ಚಾಮರಾಜ ಸವಡಿ

(೨೦೦೬ರಲ್ಲಿ ಧಾರವಾಡದ ಪ್ರಜಾವಾಣಿ ವರದಿಗಾರನಾಗಿದ್ದಾಗ ಬರೆದಿದ್ದು)





ದಾಟುವ ಮುನ್ನ ಜಾರುವ ಮನ

23 05 2008

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ.

ಎಫ್‌.ಎಂ. ಚಾನೆಲ್‌ಗಳು ಬಂದ ನಂತರ, ಕಾಯುವುದು ಒಂಚೂರಾದರೂ ಸಹನೀಯ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಂತೆ ಸಹಜವಾಗಿ ರೇಡಿಯೋ ಆನ್‌ ಆಗುತ್ತದೆ. ಬೀಗರನ್ನು ಸ್ವಾಗತಿಸಿದಂತೆ, ಅತ್ಯಂತ ಔಪಚಾರಿಕವಾಗಿ ಕಾರ್ಯಕ್ರಮ ನಿರೂಪಿಸುವ ಸರ್ಕಾರಿ ಎಫ್‌.ಎಂ. ರೇನ್‌ಬೋ, ಅರಳು ಹುರಿದಂತೆ ಪಟಪಟ ಮಾತನಾಡುವ ಖಾಸಗಿ ಎಫ್‌.ಎಂ. ರೇಡಿಯೋ ಜಾಕಿಗಳು, ರೇಡಿಯೋದಲ್ಲಿ ಮಾತನಾಡಿದೆವೆಲ್ಲ ಎಂಬ ಸಂಭ್ರಮದಲ್ಲಿ ಬೀಗುವ ಪೆದ್ದು ಗೃಹಿಣಿಯರು, ಮೊದ್ದು ಗಂಡಸರು, ಒಂದು ಹಾಡಿಗಾಗಿ ಖಾಸಗಿ ಬದುಕಿನ ಸೂಕ್ಷ್ಮ ಸಂಗತಿಗಳನ್ನೆಲ್ಲ ಒದರುವ ಅವಿವೇಕಿ ಕೇಳುಗರು, ಇವುಗಳ ನಡುವೆ ಮೂಡಿ ಬರುವ ಸೊಗಸಾದ ಹಾಡುಗಳು, ಜೋಕ್‌ಗಳು-
ಕೇಳುತ್ತ ಕೇಳುತ್ತ ಮನಸ್ಸು ಎಲ್ಲೋ ಜಾರುತ್ತ ಹೋಗುತ್ತದೆ.

ಸಿಟಿ ಬಸ್‌ನಲ್ಲಿ ಸೀಟ್‌ ಸಿಕ್ಕಿದ್ದರೆ ಈ ಮಜಾ ಇನ್ನೂ ಹೆಚ್ಚು. ಇಯರ್‌ ಫೋನ್‌ ಕಿವಿಗೆ ಸಿಕ್ಕಿಸಿಕೊಂಡು, ಮಜವಾಗಿ ಹಾಡು ಕೇಳುತ್ತಿದ್ದಾಗ, ಅಲ್ಲೆಲ್ಲೂ ದೂರ ಸಿಗ್ನಲ್‌ ಹಸಿರಾಗುತ್ತದೆ. ಹಾಗಂತ ಬಸ್ಸೇನೂ ತಕ್ಷಣ ಚಲಿಸುವುದಿಲ್ಲ. ಭಯಂಕರವಾಗಿ ಆರ್ಭಟಿಸಿ ಹೊಗೆ ಉಗುಳುತ್ತ, ಜಗಳಕ್ಕೆ ಸಿದ್ಧವಾದ ಗೂಳಿಯಂತೆ ಗುಟುರು ಹಾಕುತ್ತ, ಅವಕಾಶ ಸಿಕ್ಕ ಕೂಡಲೇ ಮುಂದೆ ಹೋಗಲು ಸಿದ್ಧವಾಗುತ್ತದೆ.

ಎದುರಾ ಬದುರಾ ಇರುವ ಟ್ರಾಫಿ‌ಕ್‌ ಹೋಗಲೋ ಬೇಡವೋ ಎಂಬಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ಎರಡನೇ ಗೇರ್‌ ಹಾಕಬೇಕೆನ್ನುವಷ್ಟರಲ್ಲಿ ಮತ್ತೆ ಟ್ರಾಫಿಕ್‌ ಜಾಮ್‌! ನಮ್ಮ ಬಸ್‌ ಹತ್ತು ಹೆಜ್ಜೆ ಮುಂದೆ ಹೋಗಿರುತ್ತದೆ. ಎದುರುಗಡೆಯಿಂದ ಒಂದು ಬಸ್‌ ಹತ್ತು ಹೆಜ್ಜೆ ನಮ್ಮತ್ತ ಬಂದಿರುತ್ತದೆ. ಕಿಟಕಿಗಳ ಪಕ್ಕ ಕಿಟಕಿಗಳು. ನಡುವೆ ಇದೆಯೋ ಇಲ್ಲವೋ ಎಂಬಂಥ ರಸ್ತೆ ವಿಭಜಕ. ಕೈ ಚಾಚಿದರೆ ಆ ಕಡೆಯ ಕಿಟಕಿಯನ್ನು ಸುಲಭವಾಗಿ ತಲುಪಬಹುದು.

ಆಗ ಶುರುವಾಗುತ್ತದೆ ನೂರಾರು ಭಾವನೆಗಳ ತಾಕಲಾಟ.

ಕಿಟಕಿಯ ಪಕ್ಕ ಕೂತವರಿಗೆ ಇತ್ತ ನೋಡಲು ಮುಜುಗರ. ಅಲ್ಲೆಲ್ಲೋ ಮಧ್ಯವಯಸ್ಕ ಪೋತಲನೊಬ್ಬ ನಮ್ಮ ಬಸ್‌ನಲ್ಲಿ ಕೂತಿದ್ದ ಹುಡುಗಿಯನ್ನು ನುಂಗುವಂತೆ ನೋಡುತ್ತಿರುತ್ತಾನೆ. ಆಂಟಿಗೆ ಜೀನ್ಸ್‌ ಹುಡುಗನ ಮೇಲೆ ಕಣ್ಣು. ಅದುವರೆಗೆ ಕಿಟಕಿಯಾಚೆಗೇ ಕಣ್ಣು ನೆಟ್ಟು ಕೂತಿದ್ದ ಹುಡುಗಿಯರು ಇದ್ದಕ್ಕಿದ್ದಂತೆ ಪ್ರಜ್ವಾವಂತೆಯರಾಗಿದ್ದಾರೆ. ಮೊಬೈಲ್‌ನತ್ತ, ಇಲ್ಲವೇ ಟಿವಿ ಪರದೆ ದಿಟ್ಟಿಸುತ್ತಿದ್ದಾರೋ ಎನ್ನುವಂತೆ ಬಿಟ್ಟ ಕಣ್ಣುಗಳಿಂದ ಎದುರು ಸೀಟ್‌ ನೋಡುವುದರಲ್ಲಿ ನಿರತರಾಗಿದ್ದಾರೆ.

ಇದಪ್ಪ ಸೀನ್‌ ಎಂದರೆ! ಪಕ್ಕದ ಬಸ್‌ನ ಕಿಟಕಿಯತ್ತ ಮನಸ್ಸು ಸೆಳೆಯುತ್ತಿದ್ದರೂ ಕಣ್ಣು ಹೊರಳಿಸಲು ಏನೋ ಸಂಕೋಚ. ಎಂಥದೋ ಬಿಗುಮಾನ. ಇದ್ದಕ್ಕಿದ್ದಂತೆ ಪಕ್ಕದ ಬಸ್‌ನಲ್ಲಿ ಗುಮ್ಮ ಬಂದಿದೆಯೇನೋ ಎಂಬಂತೆ ಎಲ್ಲ ಮುಗುಮ್ಮಾಗಿದ್ದಾರೆ. ಅಂಥದೇ ಸಂದಿಗ್ಧ ನಮ್ಮ ಬಸ್‌ನಲ್ಲಿ ಕೂತವರಲ್ಲೂ. ನೋಡಲೂ ಆಗದ, ನೋಡದೇ ಇರಲೂ ಆಗದ ಮನಃಸ್ಥಿತಿ. ಆದರೂ ಆಸೆಬುರುಕ ಮನಸ್ಸು ಕಣ್ಣು ಹೊರಳಿಸುತ್ತದೆ.

ಅಲ್ಲೇನಿದೆ?

ಮೊಬೈಲ್‌ ಕೈಲಿ ಹಿಡಿದವರು, ಕಾಣದ ಪರದೆ ನೋಡುತ್ತ ಕೂತವರು, ಕೆಕ್ಕರಿಸುವ ಆಂಟಿಯರು, ಶಪಿಸುವ ಅಜ್ಜಿಯರು, ಹೆಣ್ಣೇ ಕಾಣದ ಅಂಕಲ್‌ ಗಾವಿಲರು- ದೇವರೇ, ಬೇಗ ಬಸ್‌ ಚಲಿಸಲಪ್ಪಾ ಎಂದು ಮನಸ್ಸು ಹಾರೈಸುವಾಗ ರೇಡಿಯೋದಲ್ಲಿ ಹಾಡು: ’ಜಿಂಕೆ ಮರೀನಾ, ಜಿಂಕೆ ಮರೀನಾ…’

ಅದನ್ನು ತಾನೂ ಕೇಳಿಸಿಕೊಂಡಿತೇನೋ ಎಂಬಂತೆ ಬಸ್‌ ಜಿಂಕೆ ಮರಿಯಂತೆ ನಡೆಯದಿದ್ದರೂ ಗಜ ಗಮನೆಯಾಗಿ ಚಲಿಸಲು ಪ್ರಾರಂಭಿಸುತ್ತದೆ. ಪಕ್ಕದ ಬಸ್‌ನ ಸಕಲ ಸೌಂದರ್ಯ, ಕುರೂಪ, ವಿಕ್ಷಿಪ್ತಗಳೆಲ್ಲ ನಿಧಾನವಾಗಿ, ಮನದಾಚೆಗೇನೋ ಎಂಬಂತೆ ಸರಿದು ಹೋಗುತ್ತವೆ. ಮತ್ತೆ ಮುಂದಿನ ಸಿಗ್ನಲ್‌ನಲ್ಲಿ ಇಂಥದೇ ಮತ್ತೊಂದು ಸೀನ್‌. ಅಲ್ಲೇನು ’ಜಿಂಕೆ ಮರಿ’ ಸಿಗುತ್ತದೋ, ’ಜಲಜಲ ಜಲಜಾಕ್ಷಿ’ ಸಿಗುತ್ತಾಳೋ, ’ಮಿನ ಮಿನ ಮೀನಾಕ್ಷಿ’ ಕಾಣಿಸುತ್ತಾಳೋ- ಅದು ಟ್ರಾಫಿಕ್‌ ಮಹಾತ್ಮೆಯ ಮರ್ಜಿ.

ಆದರೆ, ಬದುಕು ಮಾತ್ರ ಸಿಗ್ನಲ್‌ನಿಂದ ಸಿಗ್ನಲ್‌ಗೆ ಕೆಂಪಾಗುತ್ತ ಹಸಿರಾಗುತ್ತ, ಯಾವುದೋ ಕನಸನ್ನು ಧೇನಿಸುತ್ತ, ಅದು ನನಸಾಗಲಿ ಎಂದು ಹಾರೈಸುತ್ತ ಹೋಗುತ್ತದೆ. ಪ್ರಯಾಣದ ಚಿಕ್ಕ ಅವಧಿಯನ್ನು ಸ್ಮರಣೀಯವಾಗಿಸುತ್ತದೆ.

- ಚಾಮರಾಜ ಸವಡಿ





ಕತ್ತೆ=ಕುದುರೆ=ಸಮಾನತೆ

23 05 2008

ಶೀರ್ಷಿಕೆ ತಮಾಷೆಯಾಗಿದೆಯಲ್ವಾ?

ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ.

ಒಂದು ಕತೆ ಕೇಳಿ. ಕಂಪನಿಯೊಂದರಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಇದ್ದವು. ಸುದ್ದಿ ತಿಳಿಯುತ್ತಲೇ ಕುದುರೆಗಳು ಅರ್ಜಿ ಹಾಕಿದವು. ಸ್ವಲ್ಪ ದಿನಗಳ ನಂತರ ಸಂದರ್ಶನಕ್ಕೆ ಕರೆ ಬಂದಿತು.

ಅಲ್ಲಿ ನೋಡಿದರೆ, ಕತ್ತೆಗಳು ಕೂಡ ಸಂದರ್ಶನಕ್ಕೆ ಬಂದಿವೆ! ಆಘಾತಗೊಂಡ ಕುದುರೆಗಳು ಪ್ರಶ್ನಿಸಿದವು, ’ಈ ಹುದ್ದೆಗಳನ್ನು ಕುದುರೆಗಳು ಮಾತ್ರ ನಿಭಾಯಿಸಬಲ್ಲವು. ಅದ್ಹೇಗೆ ನೀವು ಸಂದರ್ಶನಕ್ಕೆ ಬಂದಿದ್ದೀರಿ?’

ಕತ್ತೆಗಳು ಹೆಮ್ಮೆಯಿಂದಲೇ ಇಂಟರ್‌ವ್ಯೂ ಕಾರ್ಡ್‌ ತೋರಿಸಿದವು. ಅನುಮಾನವೇ ಇಲ್ಲ, ಕತ್ತೆಗಳನ್ನು ಅಧಿಕೃತವಾಗಿಯೇ ಸಂದರ್ಶನಕ್ಕೆ ಕರೆಯಲಾಗಿತ್ತು.

ಸ್ವಲ್ಪ ಹೊತ್ತಿನ ನಂತರ ಸಂದರ್ಶನ ಪ್ರಾರಂಭವಾಯಿತು. ಒಂದು ಕತ್ತೆಯ ನಂತರ ಒಂದು ಕುದುರೆಯನ್ನು ಕರೆಯಲಾಗುತ್ತಿತ್ತು. ಕತ್ತೆಗಳ ಜೊತೆ ಗುರುತಿಸಿಕೊಳ್ಳಬೇಕಲ್ಲ ಎಂಬ ಮುಜುಗರದಿಂದಲೇ ಕುದುರೆಗಳು ಸಂದರ್ಶನ ಮುಗಿಸಿದವು. ಕತ್ತೆಗಳಿಗೆ ಮಾತ್ರ ಹೆಮ್ಮೆಯೋ ಹೆಮ್ಮೆ.

ಸ್ವಲ್ಪ ದಿನಗಳ ನಂತರ ನೇಮಕಾತಿ ಆದೇಶಗಳು ಬಂದವು. ಕುದುರೆಗಳಿಗೆ ಸಂತಸ. ’ಪರವಾಗಿಲ್ಲ, ಕತ್ತೆಗಳೊಂದಿಗೆ ಸಂದರ್ಶನ ನೀಡಬೇಕಾಗಿ ಬಂದರೂ ಕೆಲಸ ಸಿಕ್ಕಿತಲ್ಲ’ ಎಂದು ಖುಷಿಯಿಂದಲೇ ಕಚೇರಿಗೆ ಹೋದವು.

ಅಲ್ಲಿ ಆಘಾತ ಕಾಯ್ದಿತ್ತು. ಕತ್ತೆಗಳು ಕೂಡ ಕೆಲಸಕ್ಕೆ ಹಾಜರಾಗಲು ಬಂದಿವೆ! ಅವಕ್ಕೂ ಅಪಾಯಿಂಟ್‌ಮೆಂಟ್‌ ಆರ್ಡರ್‌ ಸಿಕ್ಕಿದ್ದವು!

ಕುದುರೆಗಳಿಗೆ ಮತ್ತೆ ಮುಜುಗರ ಪ್ರಾರಂಭವಾಯಿತು. ಬಾಸ್‌ನನ್ನು ಕಂಡು ತಮ್ಮ ಭಾವನೆಗಳನ್ನು ವಿವರಿಸಿದವು: ’ಸರ್‌, ನಾವು ಕುದುರೆಗಳು. ನಾವು ಉತ್ತಮರು ಎಂಬ ಭಾವನೆಗಲ್ಲ, ನಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯೇ ಬೇರೆ. ಅದಕ್ಕೆ ತಕ್ಕ ಕೆಲಸ ಕೊಡಿ. ಕತ್ತೆಗಳೊಂದಿಗೆ ನಮ್ಮನ್ನು ಸಮೀಕರಿಸಬೇಡಿ.’

ಆದರೆ ಬಾಸ್‌ ಅವುಗಳ ವಾದ ಒಪ್ಪಲಿಲ್ಲ. ’ಇದು ಸಮಾನತೆಯ ಕಾಲ. ಕುದುರೆಗಳಿಗೆ ದೊರೆಯುವ ಎಲ್ಲ ಅವಕಾಶಗಳು ಕತ್ತೆಗಳಿಗೂ ದೊರೆಯಲಿವೆ. ನೀವು ಅವುಗಳ ಜೊತೆಗೇ ಕೆಲಸ ಮಾಡಬೇಕು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಮನ್ನಣೆ ಖಂಡಿತ ದೊರೆಯುತ್ತದೆ.’

ಕುದುರೆಗಳಿಗೆ ಅಸಮಾಧಾನವಾದರೂ ಅನಿವಾರ್ಯವಾಗಿ ಸುಮ್ಮನಾದವು. ಕೆಲಸ ಪ್ರಾರಂಭವಾಯಿತು. ಕ್ರಮೇಣ ಕತ್ತೆ ಹಾಗೂ ಕುದುರೆಗಳಿಗೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗಲು ಶುರುವಾಯಿತು. ಕುದುರೆಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಕಠಿಣ ಕೆಲಸವನ್ನು ಹಗುರವಾಗಿ ಮಾಡಿ ಮುಗಿಸುತ್ತಿದ್ದವು. ಆದರೆ ಕತ್ತೆಗಳಿಗೆ ಅಂಥ ಸೂಕ್ಷ್ಮ ಇರಲಿಲ್ಲ. ದೊಡ್ಡ ಸಾಮರ್ಥ್ಯದ ಕೆಲಸಗಳನ್ನು ಮಾಡಲು ಅವಕ್ಕೆ ಸಾಧ್ಯವಾಗುತ್ತಲೂ ಇರಲಿಲ್ಲ.

ಹಾಗಂತ ಕೆಲಸ ಬಿಟ್ಟು ಕೊಡಲೂ ಅವು ತಯಾರಿರಲಿಲ್ಲ. ’ನಾವೂ ನಿಮ್ಮಂತೇ ಸಮಾನರು. ನಮ್ಮಿಬ್ಬರ ಗ್ರೇಡ್‌ ಒಂದೇ. ಸಂಬಳ ಒಂದೇ. ಕೆಲಸ ಒಂದೇ. ಸ್ವಲ್ಪ ಕಡಿಮೆ ಗುಣಮಟ್ಟ ಬಂದರೇನಂತೆ, ಸಹಿಸಿಕೊಳ್ಳಬೇಕಪ್ಪ’ ಎಂದು ವಾದಿಸಿದವು.

ಸ್ವಲ್ಪ ದಿನ ಹೀಗೇ ನಡೆಯಿತು. ಕಚೇರಿಗೆ ಬಂದವರು ಕತ್ತೆಗಳ ಜೊತೆ ಕುದುರೆಗಳು ಕೆಲಸ ಮಾಡುತ್ತಿದ್ದುದನ್ನು ಕಂಡು ತಮಾಷೆ ಮಾಡಿದರು. ಎಷ್ಟೋ ಸಾರಿ, ಕತ್ತೆಗಳ ಕಳಪೆ ಕೆಲಸದ ಜವಾಬ್ದಾರಿಯನ್ನು ಕುದುರೆಗಳೂ ಹೊರಬೇಕಾಗಿ ಬಂದಿತು. ಆದರೆ, ’ಸಮಾನತೆ’ ವಾದ ಮುಂದೊಡ್ಡಿ ಅದನ್ನೆಲ್ಲ ಸಮರ್ಥಿಸಲಾಯಿತು.

ಇದೆಲ್ಲ ಅತಿರೇಕವಾಯಿತು ಅನ್ನಿಸಿದಾಗ ಕುದುರೆಗಳಲ್ಲಿ ಕೆಲವು ಮತ್ತೆ ಬಾಸ್‌ ಕಂಡು ತಮ್ಮ ಅಳಲು ತೋಡಿಕೊಂಡವು. ಕತ್ತೆಗಳ ಜೊತೆ ಇದ್ದರೆ ನಮ್ಮ ಕೆಲಸದ ಮಹತ್ವ ಗೊತ್ತಾಗುವುದಿಲ್ಲ. ಕೆಲಸವನ್ನು ಕಳಪೆಯಾಗಿ ಹಾಗೂ ಕಡಿಮೆ ಪ್ರಮಾಣದಲ್ಲಿ ಮಾಡಿದರು ಕೂಡ ಅವು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುತ್ತವೆ. ಅದರ ಬದಲು, ಕತ್ತೆ ಚೆನ್ನಾಗಿ ಮಾಡಬಹುದಾದ ಕೆಲಸವನ್ನು ಕತ್ತೆಗೆ ಕೊಡಿ, ಕುದುರೆಗಳು ಚೆನ್ನಾಗಿ ಮಾಡುವ ಕೆಲಸವನ್ನು ಕುದುರೆಗಳು ಮಾಡಲಿ. ಒಂದೇ ಕಚೇರಿಯಲ್ಲಿದ್ದರೂ ಸರಿ, ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಹಂಚಿಕೊಡಿ ಎಂದು ವಿನಂತಿಸಿಕೊಂಡವು.

ಆದರೆ ಬಾಸ್‌ ಕೇಳಲಿಲ್ಲ. ’ನಮ್ಮ ಪಾಲಿಸಿಯೇ ಹಾಗಿದೆ. ಸಮಾನತೆ ನಮ್ಮ ಮಂತ್ರ. ಕತ್ತೆಗಳು ಮೂಲತಃ ಕುದುರೆಗಿಂತ ಕಡಿಮೆ ದರ್ಜೆಯದು ಎಂದು ನಮಗೆ ಗೊತ್ತಿದೆ. ಅವುಗಳ ಸಾಮರ್ಥ್ಯ ಹೆಚ್ಚಿಸಲು ತುಂಬ ಸಮಯ ಹಾಗೂ ಹಣ ಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವಿಲ್ಲ. ಹಾಗಂತ ಕೇವಲ ಕುದುರೆಗಳನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲು ಆಗದು. ಆದ್ದರಿಂದಲೇ ಕತ್ತೆ ಮತ್ತು ಕುದುರೆಗಳನ್ನು ಒಟ್ಟೊಟ್ಟಿಗೇ ಕೆಲಸಕ್ಕೆ ತೆಗೆದುಕೊಂಡಿದ್ದೇವೆ’ ಎಂದು ವಿವರಿಸಿದರು.

’ಆದರೆ, ಇದರಿಂದ ಕೆಲಸದ ಗುಣಮಟ್ಟ ಹೇಗೆ ಸಾಧ್ಯವಾಗುತ್ತದೆ ಸರ್‌?’ ಎಂದವು ಕುದುರೆಗಳು.

’ಸಿಂಪಲ್‌. ಕುದುರೆಗಳ ಜೊತೆ ಇರುವುದರಿಂದ ಕತ್ತೆಗಳು ತಮ್ಮ ಕೀಳರಿಮೆ ಕಳೆದುಕೊಂಡು, ತಾವೂ ಕುದುರೆಗಳಿಗೆ ಸರಿ ಸಮ ಎಂದು ಹೆಮ್ಮೆ ಪಡುತ್ತವೆ. ಇನ್ನೊಂದೆಡೆ, ಕತ್ತೆಗಳ ಜೊತೆ ಇರುವುದರಿಂದ ಕುದುರೆಗಳಲ್ಲಿ ಕೀಳರಿಮೆ ಉಂಟಾಗಿ, ಅವು ಕತ್ತೆಗಳ ಮಟ್ಟಕ್ಕೆ ಇಳಿಯುತ್ತವೆ. ಇದರಿಂದ ಇಡೀ ಕಚೇರಿಯಲ್ಲಿ ಒಂದೇ ಮಟ್ಟದ ವರ್ಕ್‌ ಫೋರ್ಸ್‌ ಸೃಷ್ಟಿಯಾಗುತ್ತದೆ. ಹೇಗಿದೆ ಐಡಿಯಾ?’, ಕೇಳಿದರು ಬಾಸ್‌.

ನೀತಿ: ಅಂದಿನಿಂದ ಬಹುತೇಕ ಕಚೇರಿಗಳಲ್ಲಿ ಕುದುರೆಗಳ ಜೊತೆ ಜೊತೆ ಕತ್ತೆಗಳೂ ಸಮನಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಯಿತು. ಸಾಮಾಜಿಕ ನ್ಯಾಯದಂತೆ ಇದೂ ಒಂಥರಾ ಬೌದ್ಧಿಕ ನ್ಯಾಯ.

ಅನುಮಾನ ಬಂದರೆ, ನೀವು ಕೆಲಸ ಮಾಡುತ್ತಿರುವ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.

- ಚಾಮರಾಜ ಸವಡಿ
(ಪ್ರೇರಣೆ: ಒನ್‌ ನೈಟ್‌ @ ಕಾಲ್‌ ಸೆಂಟರ್‌)





ಕಚೇರಿ ಎಂದರೆ ಸುಮ್ನೇನಾ?

23 05 2008

ಅದೊಂದು ಕಚೇರಿ. ತನ್ನದೇ ಲೆಕ್ಕದಲ್ಲಿ ಅದೊಂದು ಪ್ರತ್ಯೇಕ ಜಗತ್ತು.

ಹಾಗಂದರೆ, ಅಲ್ಲಿ ಎಲ್ಲವೂ ಉಂಟು ಎಂದರ್ಥ. ಒಳ್ಳೆಯವರು, ಕೆಟ್ಟವರು, ಕೆಲಸಗಾರರು, ಸೋಮಾರಿಗಳು, ಶೂನ್ಯ ಪ್ರತಿಭೆಗಳು, ಮೊದ್ದುಮಣಿಗಳು, ಪೆದ್ದು ಮುಂಡೆಯರು- ಹೀಗೆ ಎಲ್ಲರೂ ಇರುತ್ತಾರೆ. ಕೆಲವರು ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಇನ್ನು ಕೆಲವರು ಹಾಗೇ ಕೂತಿರುತ್ತಾರೆ, ಅವರ ಕೆಲಸ ಪ್ರಾರಂಭವಾಗುವುದೇ ಇಲ್ಲ.

ಇಂಥಪ್ಪ ಕಚೇರಿಯಲ್ಲಿ ಹಲವಾರು ದೃಶ್ಯಗಳು ನಿತ್ಯ ನಡೆಯುತ್ತವೆ. ಕೆಲವೊಂದು ಪುನರಾವರ್ತನೆಯಾದರೆ, ಇನ್ನು ಕೆಲವು ನಿರೀಕ್ಷಿತ. ಅಪರೂಪಕ್ಕೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು.

ಒಳ ಬರುತ್ತಲೇ ಬೂಟಾಟಿಕೆಯ ವಾಸನೆ ಬಡಿಯುವುದಷ್ಟೇ ಅಲ್ಲ, ಕಣ್ಣೆದುರು ರಾಚಲೂತೊಡಗುತ್ತದೆ. ’ನಿನ್ನೆ ಪಾರ್ಟಿಗೆ ಹೋಗಿದ್ದೆ ಕಣೆ, ಏನ್‌ ಚೆನ್ನಾಗಿತ್ತು ಅಂತೀಯಾ’ ಎಂದು ಲಲನೆಯೊಬ್ಬಳು ಹೇಳುತ್ತಿದ್ದರೆ, ಅವಳ ಗೆಳತಿಯರ ಪೈಕಿ ಒಬ್ಬಿಬ್ಬರು ಮುಖವರಳಿಸಿ ಕೇಳಿಸಿಕೊಂಡರೆ, ಉಳಿದವರು ತಮ್ಮ ಕೆಲಸದಲ್ಲಿ ಬಿಜಿಯಾಗಿರುವ ನಟನೆ ಮಾಡುತ್ತಲೇ ಕಿವಿ ಅತ್ತ ತೇಲಿಬಿಟ್ಟಿರುತ್ತಾರೆ. ಇನ್ನೊಂದೆಡೆ, ಬ್ರೆಕಿಂಗ್‌ ನ್ಯೂಸ್‌ ಕೊಡುವ ಇರಾದೆಯಲ್ಲಿ ವರದಿಗಾರ ಗಂಭೀರತೆ ನಟಿಸುತ್ತ ಸರಭರ ಓಡಾಡುತ್ತಿರುತ್ತಾನೆ. ಸರಿಯಾಗಿ ಹುಡುಕಿದರೆ, ಅಂದಿನ ದಿನಪತ್ರಿಕೆಯ ಯಾವುದೋ ಒಂದೆಡೆ, ’ಬ್ರೆಕಿಂಗ್‌ ನ್ಯೂಸ್‌’ ಸುಳಿವು ಸಿಗುತ್ತದೆ.

ಎಲ್ಲರಿಗಿಂತ ತಡವಾಗಿ ಹಿರಿಯ ತಲೆಗಳು ಬರುತ್ತವೆ. ಜಗತ್ತಿನ ಭಾರವೆಲ್ಲ ತಮ್ಮ ತಲೆಯ ಮೇಲಿದೆ ಎಂಬಂತೆ ಮುಗುಳ್ನಗು ಮನೆಯಲ್ಲಿಟ್ಟು, ಗಂಭೀರವದನರಾಗಿ ಬರುತ್ತಾರೆ. ಬಂದವರೇ ಬ್ಯಾಗಿಟ್ಟು, ಕಾರಣವಿಲ್ಲದೇ ಆ ಕಡೆಯಿಂದ ಈ ಕಡೆ ಓಡಾಡುತ್ತಾರೆ. ಸುಳ್ಳು ಸುಳ್ಳೇ ಕಂಪ್ಯೂಟರ್ ಪರದೆಗಳನ್ನು ದಿಟ್ಟಿಸುತ್ತಾರೆ. ಸಹೋದ್ಯೋಗಿಗಳನ್ನು ಕರೆಯುತ್ತಾರೆ. ಅರ್ಥವಿಲ್ಲದ ವಿಷಯಗಳನ್ನು ಮಾತನಾಡಿ ಅವರಲ್ಲಿ ಗೊಂದಲ ಮೂಡಿಸುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇನ್ನಿಲ್ಲದ ಸೀರಿಯೆಸ್‌ನೆಸ್‌ನಲ್ಲಿ ಕಂಪ್ಯೂಟರ್ ತೆರೆ ಮೇಲೆ ದೃಷ್ಟಿ ಇಟ್ಟು ಕೂತುಬಿಡುತ್ತಾರೆ.

’ಅರೆರೆ, ನೀವು ನಮ್ಮ ಬಾಸ್‌ ಬಗ್ಗೆ ಹೇಳುತ್ತಿಲ್ಲ ತಾನೆ?’ ಎಂದು ನಿಮಗೆ ಅನ್ನಿಸಿದರೆ, ಅಚ್ಚರಿ ಬೇಡ. ಮಿತ್ರರೇ, ಎಲ್ಲರ ಬಾಸ್‌ಗಳೂ ಸಾಮಾನ್ಯವಾಗಿ ಇರೋದೇ ಹೀಗೆ. ಎಲ್ಲೋ ಓದಿದ ವಾಕ್ಯವೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ನಮಗಿಂತ ದಡ್ಡರು, ತಿಕ್ಕಲರು, ಪೆದ್ದರು, ಮೂರ್ಖರು, ದುಷ್ಟರು, ಅತ್ತೆ ಮನಃಸ್ಥಿತಿಯವರು ಸಾಮಾನ್ಯವಾಗಿ ನಮ್ಮ ಸೀನಿಯರ್‍ ಆಗಿರುತ್ತಾರಂತೆ. ಅನುಮಾನ ಬಂದರೆ ಕೊಂಚ ಗಮನಿಸಿ ನೋಡಿ: ನಮ್ಮ ಬಹುತೇಕ ಸೀನಿಯರ್‌ಗಳು ಹೀಗೆ ತಾನೇ ಇರೋದು!

ನೀವು ಉತ್ತಮ ವಿಚಾರ ಹೇಳಿದರೆ, ಆ ಮನುಷ್ಯನಿಗೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ’ಮೊದಲು ನಾನು ಹೇಳೋದು ಕೇಳಿ’ ಎಂದೋ, ’ಅದೆಲ್ಲ ನಡೆಯೋಲ್ಲ’ ಎಂದೋ, ’ಅದನ್ನು ಮಾಡುತ್ತ ಕೂತರೆ ತಡವಾಗುತ್ತದೆ’ ಎಂದೋ ತನ್ನ ಕೆಳಮಟ್ಟದ ಐಡಿಯಾವನ್ನೇ ಹೇರಿ ಹೋಗುತ್ತಾನೆ. ಮನಸ್ಸಿಲ್ಲದಿದ್ದರೂ ನೀವು ಅದನ್ನೇ ಮಾಡಬೇಕು.

ಸಾಮಾನ್ಯವಾಗಿ, ಯಾವ ಕಚೇರಿಯಲ್ಲೂ ಹೊಸ ವಿಚಾರಗಳನ್ನು ಸ್ವಾಗತಿಸುವುದಿಲ್ಲ. ನೀವು ಬಾಸ್‌ಗಿಂತ ಜಾಣರಾಗಿದ್ದರೆ ದಯವಿಟ್ಟು ಅದನ್ನು ತೋರಿಸಿಕೊಳ್ಳಬೇಡಿ. ಬಾಸ್‌ ತಪ್ಪು ಮಾಡಿದ್ದರೆ, ಮಾಡುತ್ತಿದ್ದರೆ ಯಾವ ಕಾರಣಕ್ಕೂ ಬಾಯಿ ಬಿಡಬೇಡಿ. ಅದರಿಂದ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.

ಇಂಥ ಹಲವಾರು ಘಟನೆಗಳನ್ನು ಇನ್ನು ಮುಂದೆ ವಿವರವಾಗಿ ಬರೆಯುತ್ತ ಹೋಗುತ್ತೇನೆ. ಅದಕ್ಕೂ ಮುನ್ನ ಒಂದು ಸಲಹೆ: ಸಾಧ್ಯವಾದರೆ ‘ಒನ್‌ ನೈಟ್‌ ಎಟ್‌ ಕಾಲ್‌ ಸೆಂಟರ್‌’ ಎಂಬ ಪುಸ್ತಕ ಸಿಕ್ಕರೆ ಓದಿ. ಇಂಥ ಕಚೇರಿ, ಅಂಥ ಬಾಸ್‌ಗಳ ಬಗ್ಗೆ ಉತ್ತಮ ವಿವರಣೆ ಇದೆ ಅದರಲ್ಲಿ.

- ಚಾಮರಾಜ ಸವಡಿ





ನಿಮಗೂ ಹೀಗೆ ಅನಿಸಿದೆಯೆ?

23 05 2008

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ನಾನು, ಮೌನವಾಗಿ ಇದ್ದುಬಿಡುತ್ತೇನೆ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.

ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ





ನ್ಯಾನೊ ಮತ್ತು ವೈಚಾರಿಕ ಸಣ್ಣತನ

23 05 2008

(2007 ನವೆಂಬರ್‌ನಲ್ಲಿ ಬರೆದ ಲೇಖನ)

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.

ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.

ಪರ್ಯಾಯ ಪೀಠ, ಕೃಷ್ಣ ಪೂಜೆ ಹಾಗೂ ಪುತ್ತಿಗೆ ಶ್ರೀಗಳ ವಿದೇಶಿ ಪಯಣದ ಕಥೆಯನ್ನು ಓದುತ್ತಿದ್ದರೆ ನಗೆ ಬರುತ್ತದೆ, ವಿಷಾದವೂ ಆಗುತ್ತದೆ. ಏಕೆಂದರೆ, ಕೃಷ್ಣ ಅತ್ಯಂತ ಮುಕ್ತ ಮನಸ್ಸಿನಿಂದ ಬದುಕಿದ ವ್ಯಕ್ತಿ. ಜೀವನ ಪ್ರೀತಿಯನ್ನು ಕಡೆತನಕ ಉಳಿಸಿಕೊಂಡು ಬಂದ ವ್ಯಕ್ತಿ. ಯಾವ ಪಾರಂಪರಿಕ ಕಟ್ಟುಪಾಡುಗಳಿಗೂ ಬಂಧಿಯಾಗದೆ, ತನ್ನ ಕಾಲದ ಎಲ್ಲ ಮೂಢ ನಂಬಿಕೆಗಳನ್ನು ಹಾಗೂ ಆಷಾಡಭೂತಿತನ (ಹಿಪೊಕ್ರಸಿ)ವನ್ನು ವಿರೋಧಿಸಿದ್ದ ವ್ಯಕ್ತಿ ಆತ. ಎಲ್ಲರ ನಂಬಿಕೆಗೆ ವಿರುದ್ಧವಾಗಿ, ಎಲ್ಲರ ಕನಸುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಈ ಅಪರೂಪದ ವ್ಯಕ್ತಿಯ ಪೂಜೆಯ ಹೆಸರಿನಲ್ಲಿ ನಮ್ಮ ಧಾರ್ಮಿಕ ಹಿರಿ ತಲೆಗಳು ಮಾಡುತ್ತಿರುವುದಾದರೂ ಏನು?

ಕೃಷ್ಣ ಪಂಥ ಸಾವಿರಾರು ವರ್ಷಗಳ ಹಿಂದೆಯೇ ಸಾಗರ ದಾಟಿತ್ತು. ಆಧುನಿಕ ಕಾಲದಲ್ಲಿ ಇಸ್ಕಾನ್ ಆ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಧಾರ್ಮಿಕ ನಂಬಿಕೆಗಳಿಗೆ ದೇಶಗಳ, ನದಿ-ಕಡಲುಗಳ ಗಡಿಗಳು ಇರುವುದಿಲ್ಲ. ಒಂದು ವೇಳೆ ಅಂತಹ ಕಟ್ಟುಪಾಡುಗಳಡಿ ಯಾವುದಾದರೂ ಧರ್ಮ ಅಥವಾ ನಂಬಿಕೆ ಸಿಕ್ಕಿಕೊಂಡಿದ್ದರೆ, ಅದು ಖಂಡಿತ ಧರ್ಮವಲ್ಲ.

ಹೀಗಿದ್ದರೂ, ಉಡುಪಿ ಅಷ್ಟಮಠಗಳ ಬಹುತೇಕ ಶ್ರೀಗಳು ಯಾವುದೇ ನೆಲೆಗಟ್ಟಿಲ್ಲದ, ತರ್ಕಬದ್ಧವಲ್ಲದ ನಂಬಿಕೆಗೆ ಜೋತು ಬಿದ್ದು, ತಮ್ಮದೇ ಪಂಥದ ವ್ಯಕ್ತಿಯ ಸಹಜ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪೇಜಾವರ ಶ್ರೀಗಳಂತಹ ಧಾರ್ಮಿಕ ರಾಜಕಾರಣಿಗಳು ಕೈಜೋಡಿಸಿದ್ದಾರೆ. ವಿವಾದಗಳಿದ್ದಲ್ಲಿ ಸಾಮಾನ್ಯವಾಗಿ ಚಿದಾನಂದಮೂರ್ತಿಗಳು, ಚಂಪಾ-ವಾಟಾಳ್-ಪಾಟೀಲ ಪುಟ್ಟಪ್ಪರಂಥವರು ಇದ್ದೇ ಇರುತ್ತಾರೆ. ಆದರೆ, ಈಗ ಆ ಸಾಲಿಗೆ ಪೇಜಾವರ ಶ್ರೀಗಳೂ ಸೇರಿದ್ದು ವಿಷಾದಕರ.

ನಮಗೆ ಕೃಷ್ಣನ ಸಂದೇಶ ಮುಖ್ಯವೇ, ಆತನನ್ನು ಪೂಜಿಸುವ ವಿಧಿ-ವಿಧಾನಗಳು ಮುಖ್ಯವೆ? ’ಪತ್ರಂ ಪುಷ್ಪಂ ಫಲಂ ತೋಯಂ…’ ಎಂದಿದ್ದಾನೆ ಕೃಷ್ಣ ಗೀತೆಯಲ್ಲಿ. ಎಲೆ, ಹೂ, ಹಣ್ಣು- ಹೀಗೆ ಯಾವುದನ್ನು ನನಗೆ ಅರ್ಪಿಸಿದರೂ ಅದು ಪ್ರಿಯವೇ. ಎಲ್ಲಕ್ಕಿಂತ ಪ್ರಿಯ ಭಕ್ತಿ ತುಂಬಿದ ಪ್ರಾರ್ಥನೆ’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಅಷ್ಟಮಠಗಳ ನಾಯಕರು, ಅವರ ನಂಬಿಕೆಗಳನ್ನು ಬೆಂಬಲಿಸುವ ಕುರುಡು ಮನಸ್ಸುಗಳು ಎಂದಾದರೂ ಅರ್ಥ ಮಾಡಿಕೊಳ್ಳುವುದು ಸಾಧ್ಯವೆ?

******

ಎರಡನೆಯದು, ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ೧ ಲಕ್ಷ ರೂಪಾಯಿ ಬೆಲೆಯ ನ್ಯಾನೊ ಕಾರಿನ ಬಗ್ಗೆ.
ಮಾಧ್ಯಮದಲ್ಲಿ ಕಾರಿನ ಭರಾಟೆಯಂತೂ ಜೋರಾಗಿಯೇ ಇದೆ. ವಾದ-ಪ್ರತಿವಾದಗಳೂ ಕೇಳಿ ಬಂದಿವೆ. ಅವುಗಳ ಪೈಕಿ ನನ್ನ ಗಮನ ಸೆಳೆದ ಒಂದೆರಡು ವಾದಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತೇನೆ.

ಒಬ್ಬ ಮಹನೀಯರು, ’ಟಾಟಾ ಮಾಡಿದ್ದು ಒಂದಿಷ್ಟೂ ಸರಿಯಿಲ್ಲ. ಕಡಿಮೆ ವೆಚ್ಚೆದಲ್ಲಿ ಕಾರು ದೊರೆಯುವಂತಾದರೆ ಮೊದಲೇ ಗಿಜಿಗುಟ್ಟುತ್ತಿರುವ ಭಾರತದ ರಸ್ತೆಗಳು ಉಸಿರುಕಟ್ಟುವಂತಾಗುತ್ತವೆ. ವಾಯು ಮಾಲಿನ್ಯ ಹೆಚ್ಚುತ್ತದೆ. ಸಹಾಯಧನದ ಮರ್ಜಿಯಲ್ಲಿರುವ ತೈಲೋತ್ಪನ್ನಗಳ ಆಮದು ಇನ್ನಷ್ಟು ಹೆಚ್ಚಿ, ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದ’ ಎಂದು ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹೇಳಿದ್ದಾರೆ.

ವಾರೆವ್ಹಾ ಆಷಾಡಭೂತಿತನವೇ!

ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಬಡ ರೈತರಿಂದ ಭೂಮಿ ವಶಪಡಿಸಿಕೊಂಡು ವಿಮಾನ ನಿಲ್ದಾಣ ಮಾಡಿದರೆ ಈ ಮಹನೀಯರು ಅದನ್ನು ಪ್ರಗತಿ ಎಂದು ಬಣ್ಣಿಸುತ್ತಾರೆ. ರೈತನ ಭೂಮಿಯನ್ನು ಕ್ಷುಲ್ಲಕ ಬೆಲೆಗೆ ಕೊಂಡು ಐ.ಟಿ. ಕಂಪನಿ ಮಾಡಿದರೆ, ಅದನ್ನು ದೇಶ ಹೆಮ್ಮೆ ಪಡಬೇಕಾದ ಬೆಳವಣಿಗೆ ಎಂದು ಮೆಚ್ಚುತ್ತಾರೆ. ಆದರೆ, ಮಧ್ಯಮವರ್ಗದ ವ್ಯಕ್ತಿಯೊಬ್ಬ, ತನ್ನ ಬಜೆಟ್‌ಗೆ ನಿಲುಕುವ ಮಿತಿಯಲ್ಲಿ ಕಾರೇ ದೊರೆಯುತ್ತದೆ ಎಂದು ಸಂಭ್ರಮಿಸಿದರೆ, ಈ ವ್ಯಕ್ತಿಗೆ ಅದು ವಾತಾವರಣಕ್ಕೆ, ವಾಹನ ಸಂದಣಿಗೆ, ದೇಶದ ಕೀಸೆಗೆ ನುಗ್ಗಲು ಯತ್ನಿಸುತ್ತಿರುವ ಭೂತದಂತೆ ಕಾಣುತ್ತದೆ.

ನಿಜವಾದ ಆಷಾಡಭೂತಿತನ ಎಂದರೆ ಇದೇ ಇರಬೇಕು.

ಮಧ್ಯಮವರ್ಗದವರು, ಅವರಿಗಿಂತ ಕೆಳಗಿರುವವರು ಆರ್ಥಿಕವಾಗಿ ಮುಂದೆ ಬರಬಾರದು ಎಂಬ ಸಣ್ಣತನ ಬಿಟ್ಟರೆ ಈ ವಾದದಲ್ಲಿ ಮೆಚ್ಚುವಂಥದ್ದು ಏನೂ ಕಾಣುತ್ತಿಲ್ಲ. ಕೆಲವೇ ಕೆಲವು ಜನರು ಬಳಸುವ ವಿಮಾನ ನಿಲ್ದಾಣಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿಗಳು, ಸಾವಿರಾರು ಎಕರೆ ಭೂಮಿ ಖರ್ಚಾದರೆ ಪರವಾಗಿಲ್ಲ. ಆದರೆ, ತನ್ನ ಮಿತಿಯಲ್ಲಿ ನಿಲುಕುವ ಒಂದು ಕಾರನ್ನು ಮಧ್ಯಮವರ್ಗದ ವ್ಯಕ್ತಿ ಖರೀದಿಸಲು ಉತ್ಸುಕನಾದರೆ, ಅದರ ಹಿಂದೆ ವಿನಾಶದ ಭೀತಿ ಕಾಣುತ್ತದೆ. ಅಡುಗೆ ಅನಿಲ ಖರೀದಿಸಲು ಶಕ್ತನಲ್ಲದ ವ್ಯಕ್ತಿ ಸೌದೆ ಉರಿ ಹಚ್ಚಿ ಅಡುಗೆ ಮಾಡಿದರೆ, ಅದನ್ನು ಪರಿಸರ ಮಾಲಿನ್ಯ ಕ್ರಮ ಎಂದು ಬಣ್ಣಿಸಿದಂತಿದೆ ಈ ಮಹನೀಯರ ವಾದ.

ಇದಕ್ಕೂ, ಅಷ್ಟಮಠಗಳ ಶ್ರೀಗಳು ಎಬ್ಬಿಸುತ್ತಿರುವ ವೈಚಾರಿಕ ಮಾಲಿನ್ಯಕ್ಕೂ ಏನೂ ವ್ಯತ್ಯಾಸವಿಲ್ಲ. ಎರಡೂ ಬೌದ್ಧಿಕ ಅಧಃಪತನದ ಸಂಕೇತಗಳೇ.

- ಚಾಮರಾಜ ಸವಡಿ





ಅಸೂಯೆ ಎಂಬ ತಡೆಗೋಡೆ…

23 05 2008

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ ಗಮನವೆಲ್ಲ ಇನ್ನೊಬ್ಬರ ಪ್ರಯತ್ನ, ಸಾಧನೆಯತ್ತಲೇ ಇರುತ್ತದೆ. ಆದರೆ, ಅದನ್ನು ಮೆಚ್ಚುಗೆಯ, ಪ್ರೇರಣೆಯ ಕಣ್ಣುಗಳಿಂದ ಗಮನಿಸುವುದಿಲ್ಲ. ಬದಲಾಗಿ, ಅಸೂಯೆಯಿಂದ ಇನ್ನೊಬ್ಬರ ಸಾಧನೆಯನ್ನು ನೋಡುತ್ತಾರೆ. ಆ ಸಾಧನೆಯ ವೇಗವನ್ನು, ಪರಿಣಾಮವನ್ನು ತಗ್ಗಿಸುವುದು ಹೇಗೆಂದು ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮೆಲ್ಲ ಶ್ರಮ, ಸಾಮರ್ಥ್ಯವನ್ನು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಬಳಸುತ್ತಾರೆ.

’ಪರಿಣಾಮ ಏನಾಗುತ್ತದೆ?

’ವ್ಯಕ್ತಿಯೊಬ್ಬನ ಸಹಜ ಸಾಮರ್ಥ್ಯದ ದುರ್ಬಳಕೆಯಾಗುತ್ತದೆ. ಯಾರು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಪ್ರಯತ್ನಿಸುತ್ತಿರುತ್ತಾರೋ, ಅವರ ಪ್ರಗತಿ ಸಹಜವಾಗಿ ಕುಂಠಿತವಾಗುತ್ತದೆ. ಅವರ ಎಲ್ಲ ಸಮಯ ಹಾಗೂ ಯೋಚನೆ ಇನ್ನೊಬ್ವ ವ್ಯಕ್ತಿಯ ನಡೆಯನ್ನು ಅವಲಂಬಿಸತೊಡಗುತ್ತದೆ. ಅಸೂಯಾಪರ ವ್ಯಕ್ತಿಯ ಮನಸ್ಸನ್ನು ಇನ್ನೊಬ್ಬ ವ್ಯಕ್ತಿ ತುಂಬಿಕೊಳ್ಳುತ್ತಾನೆ. ನಾಶದ ಉದ್ದೇಶ ಈಡೇರುವತನಕ ಈ ವ್ಯಕ್ತಿ ಬೇರೊಂದು ವಿಷಯದತ್ತ ಗಮನ ಹರಿಸುವುದಿಲ್ಲ. ತನ್ನ ಗುರಿ ಸಾಧಿಸಿದ ನಂತರವೇ ಆತನಿಗೆ ನೆಮ್ಮದಿ.

’ಆದರೆ ಇದರಿಂದ ಅಸೂಯಾಪರನಿಗೆ ಏನು ಸಿಕ್ಕಂತಾಯಿತು? ಕ್ಷುದ್ರ ತೃಪ್ತಿ ಬಿಟ್ಟರೆ ಬೇರೆ ಏನೂ ಇಲ್ಲ. ಬದಲಾಗಿ, ಅವನ ಸಮಯ, ಶಕ್ತಿ ಹಾಗೂ ಸಾಮರ್ಥ್ಯ ವ್ಯರ್ಥ್ಯವಾಗುತ್ತದೆ. ಅವನ ಬುದ್ಧಿಶಕ್ತಿ ಕ್ರಿಯಾತ್ಮಕವಾದುದನ್ನು ಮಾಡಲಾಗದ ಸ್ಥಿತಿ ತಲುಪುತ್ತದೆ. ಕ್ರಮೇಣ ಅಸೂಯಾಭಾವನೆ ಅವನನ್ನು ಎಷ್ಟೊಂದು ಆವರಿಸಿಕೊಳ್ಳುತ್ತದೆಂದರೆ, ಸಹಜ ಸಮಾಧಾನ, ಸಂತೃಪ್ತಿ, ವಿವೇಕವನ್ನು ಕಳೆದುಕೊಂಡು ಆತ ಮಾನಸಿಕ ರೋಗಿಯಾಗುತ್ತಾನೆ.

’ಅಸೂಯೆ ಕೆಟ್ಟದ್ದು. ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೊಬ್ಬರ ಪ್ರಗತಿಯನ್ನು ತಡೆದೆವು, ಅದಕ್ಕೆ ತೊಂದರೆ ಉಂಟು ಮಾಡಿದೆವು ಎಂಬ ಕ್ಷುದ್ರ ತೃಪ್ತಿ ಬಿಟ್ಟರೆ, ಅಸೂಯಾಪರನಿಗೆ ಏನೂ ದಕ್ಕುವುದಿಲ್ಲ. ಬದಲಾಗಿ ಆತ ತನ್ನದೇ ಮಾರ್ಗವನ್ನು ಕಳೆದುಕೊಂಡು, ಇನ್ನೊಬ್ಬರ ನಡೆಯನ್ನು ಕಾಯುತ್ತ ಇದ್ದಲ್ಲೇ ಇದ್ದುಬಿಡುತ್ತಾನೆ.’
ಪುಸ್ತಕ ಓದುತ್ತ ಹೋದಂತೆ ನನಗೆ ಸಾಧು ಹೇಳಿದ ಮಾತುಗಳು ಮತ್ತೆ ನೆನಪಾದವು.

ಒಬ್ಬ ಮನುಷ್ಯ ಇನ್ನೊಬ್ಬನನ್ನು ಕಂಡು ಏಕೆ ಅಸೂಯೆ ಪಡುತ್ತಾನೆ ಎಂಬುದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಆದರೆ, ಅವು ಸಮರ್ಥನೀಯ ಎಂದು ಅನ್ನಿಸುವುದಿಲ್ಲ. ನಿಜವಾದ ಸತ್ವ ಇರುವ ವ್ಯಕ್ತಿ ಹೊಸ ಹೊಸ ಸಾಧನೆಗಳನ್ನು ಮಾಡುತ್ತಲೇ ಹೋಗುತ್ತಾನೆ. ಅಸೂಯಾಪರನೊಬ್ಬನ ಅಡ್ಡಗಾಲು ಆತನನ್ನು ಶಾಶ್ವತವಾಗಿ ಮುಗಿಸಲಾರದು.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಜನ ಅಸೂಯಿಗಳು ಸಿಕ್ಕೇ ಸಿಗುತ್ತಾರೆ. ಅವರು ನಮ್ಮ ಜತೆಗೇ ಇರುತ್ತಾರೆ. ಒಮ್ಮೊಮ್ಮೆ ನಮ್ಮ ಪರಮಾಪ್ತರಂತೆ ನಟಿಸುತ್ತಿರುತ್ತಾರೆ. ನಮ್ಮ ಒಂದೇ ಒಂದು ತಪ್ಪನ್ನು ಹಿಗ್ಗಿಸಿ ತೋರಿಸಲು, ನಮ್ಮನ್ನು ಅವಮಾನಿಸಲು, ನಮ್ಮ ಅವಕಾಶಗಳನ್ನು ಕಸಿದುಕೊಳ್ಳಲು ಪ್ರತಿ ಕ್ಷಣವೂ ಕಾಯುತ್ತಿರುತ್ತಾರೆ. ಅವರ ನಿತ್ಯದ ಬದುಕು ನಮ್ಮನ್ನು, ನಮ್ಮ ನಡೆಯನ್ನು ಅವಲಂಬಿಸಿರುತ್ತದೆ. ಇವರೊಂಥರಾ ಮಾನಸಿಕ ಅವಲಂಬಿಗಳು. ಮಾನಸಿಕ ರೋಗಿಗಳು.

ಎಷ್ಟೋ ಸಾರಿ ಅವರಿಂದ ನಮಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಅವಮಾನವೂ ಆಗುತ್ತದೆ. ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಮನಸ್ಸು ರೊಚ್ಚಿಗೇಳುತ್ತದೆ. ಆದರೆ, ಒಂದೇ ಒಂದು ನಿಮಿಷ ಯೋಚಿಸಿ ನೋಡಿ! ನಮ್ಮನ್ನು ಕೆಣಕುವ ವ್ಯಕ್ತಿಗೆ, ನಮ್ಮನ್ನು ತನ್ನ ಮಟ್ಟಕ್ಕೆ, ತನ್ನ ಕ್ಷೇತ್ರಕ್ಕೆ ತಂದು ಕದನಕ್ಕಿಳಿಸುವ ಉದ್ದೇಶ ಮಾತ್ರ ಇರುತ್ತದೆ. ನಾವು ರೊಚ್ಚಿಗೆದ್ದರೆ, ಮನಸ್ಸಿನ ಸಮತೋಲನ ಕಳೆದುಕೊಂಡರೆ, ಅಸೂಯಿಯ ಉದ್ದೇಶವನ್ನು ಈಡೇರಿಸಿದಂತೆ.

ಸಾಮಾನ್ಯವಾಗಿ ಇಂಥ ಅಸೂಯಿಗಳು ಬಲು ಬೇಗ ಪತ್ತೆಯಾಗುತ್ತಾರೆ. ಅವರನ್ನು ಗುರುತಿಸಲು ತುಂಬ ಕಷ್ಟಪಡಬೇಕಿಲ್ಲ. ಎಷ್ಟೋ ಸಾರಿ ಅಸೂಯಿಗಳು ನಮಗಿಂತ ಮೇಲಿನ ಹಂತದಲ್ಲಿರುತ್ತಾರೆ. ಆಗ ಕಷ್ಟ ಇನ್ನೂ ಜಾಸ್ತಿ. ನಮ್ಮನ್ನು ಹೀಯಾಳಿಸಿ, ನಮಗೆ ಸಹಜವಾಗಿ ದಕ್ಕಬಹುದಾದ ಅವಕಾಶಗಳನ್ನು ನಿರಾಕರಿಸಿ, ಅಥವಾ ಅವನ್ನು ನಮಗಿಂತ ಕಡಿಮೆ ಬುದ್ಧಿಮತ್ತೆ, ಪ್ರತಿಭೆ ಇರುವವರಿಗೆ ಕೊಡುವ ಮೂಲಕ ಅವರು ವಿಲಕ್ಷಣ ಆನಂದ ಅನುಭವಿಸುತ್ತಾರೆ.

ಆಗೆಲ್ಲ, ನಮ್ಮ ಮನಸ್ಸು ರೊಚ್ಚಿಗೇಳುತ್ತದೆ. ಇದನ್ನು ಖಂಡಿಸಬೇಕು, ಅಸೂಯಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಹಂಬಲಿಸುತ್ತದೆ. ಆದರೆ, ಹಾಗೆ ಮಾಡಲು ಹೋದರೆ, ಅಸೂಯಿಗೂ ನಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಏಕೆಂದರೆ, ಮನಸ್ಸಿನೊಳಗೆ ನಮ್ಮ ಪ್ರಗತಿಗಿಂತ ಇನ್ನೊಬ್ಬನ ವಿನಾಶದ ವಿಚಾರವೇ ತುಂಬಿಕೊಳ್ಳುತ್ತದೆ. ನಮ್ಮ ಗುರಿಯನ್ನು ಮರೆತು, ಇನ್ನೊಬ್ಬರಿಗೆ ಕೆಟ್ಟದು ಮಾಡುವುದು ಹೇಗೆ? ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಮನಸ್ಸು ರೋಗಿಯಾಗುತ್ತದೆ.

ಅದರ ಬದಲು, ಸಮಾಧಾನದಿಂದ ಇರಲು ಪ್ರಯತ್ನಿಸೋಣ. ನಮ್ಮ ಅಸಲಿ ಪ್ರತಿಭೆಯನ್ನು ಮತ್ತಷ್ಟು ಸಾಣೆ ಹಿಡಿಯುವುದರಲ್ಲಿ ಸಮಯ ವಿನಿಯೋಗಿಸೋಣ. ಹೊಸ ಹೊಸ ವಿಷಯಗಳನ್ನು ಕಲಿಯಲು ಯತ್ನಿಸೋಣ. ನಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಕಲಿಯುವ ಮೂಲಕ, ಮಾಡಲು ಯತ್ನಿಸುವ ಮೂಲಕ, ನಿರಾಶೆಯನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳೋಣ. ನಮ್ಮ ಭಾವನೆಗಳ ಮೇಲಿನ ಹಿಡಿತ ಬಲಗೊಳ್ಳುತ್ತ ಹೋದಂತೆ, ಹೊಸ ಆತ್ಮವಿಶ್ವಾಸ ಬೆಳೆಯುತ್ತ ಹೋಗುತ್ತದೆ. ಅಸೂಯಿಗಳ ಸಣ್ಣತನ ಕಂಡು ನಗುವ, ಅವರ ಅಡ್ಡಗಾಲನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯ ನಮ್ಮದಾಗುತ್ತದೆ.

ತುಂಬ ಜನ, ತಾವು ಅಸೂಯಿಗಳಲ್ಲ ಎಂದೇ ಅಂದುಕೊಳ್ಳುತ್ತಾರೆ. ನನಗೆ ಸವಾಲಾಗಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಕುಂದಿಸಲು ಯತ್ನಿಸುತ್ತಿದ್ದೇನೆ ಎಂದಷ್ಟೇ ಭಾವಿಸುತ್ತಾರೆ. ಆದರೆ, ಎಲ್ಲಿಯವರೆಗೆ ನಮ್ಮಿಂದ ಕ್ರಿಯಾಶೀಲತೆ ಸಾಧ್ಯವಾಗುವುದಿಲ್ಲವೋ, ಹೊಸದನ್ನು ಕಲಿಯಲು ಕಷ್ಟವಾಗುತ್ತದೋ, ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಅಸೂಯೆಯ ಒಂದಂಶ ನಮ್ಮಲ್ಲೂ ಇದೆ ಎಂದೇ ಅರ್ಥ.
ಅದನ್ನು ದೂರ ಮಾಡಿದರೆ ಮಾತ್ರ ನಾವು ಕ್ರಿಯಾಶೀಲರಾಗುತ್ತೇವೆ. ಇಲ್ಲದಿದ್ದರೆ ಯಾವುದೋ ಒಂದು ಅನುಪಯುಕ್ತ ಸಿದ್ಧಾಂತಕ್ಕೆ ಕಟ್ಟುಬಿದ್ದು, ಅದರಲ್ಲಿಯೇ ಮುಳುಗೇಳುತ್ತ, ನಮ್ಮದೇ ಒಂದು ಸೀಮಿತ ವಲಯವನ್ನು ಕಟ್ಟಿಕೊಂಡು, ಅದರಲ್ಲಿಯೇ ಈಜಾಡುತ್ತ ಇದ್ದು ಬಿಡುತ್ತೇವೆ. ನಮ್ಮ ವಲಯದಾಚೆಗೂ ಜಗತ್ತಿದೆ ಎಂಬುದನ್ನೇ ಮರೆತು ಬಾವಿ ಕಪ್ಪೆಗಳಾಗುತ್ತೇವೆ. ವ್ಯಕ್ತಿಗಳು, ಸಿದ್ಧಾಂತಗಳು, ಪಕ್ಷಗಳು, ಜಾತಿಗಳು, ಧರ್ಮಗಳ ನಡುವೆ ಗೋಡೆ ಎದ್ದಿರುವುದೇ ಈ ಕಾರಣಕ್ಕೆ.

ಹಾಗಂತ ಆ ಸಾಧು ಹೇಳಿದ್ದ. ಇವತ್ತಿನ ಕ್ಷಣದವರೆಗೂ, ಒಂದೇ ಒಂದು ಸಾರಿಯೂ, ಅದು ಸುಳ್ಳು ಎಂದು ನನಗೆ ಅನ್ನಿಸಿಲ್ಲ!

- ಚಾಮರಾಜ ಸವಡಿ





ನಿಮ್ಮೊಂದಿಗೆ

23 05 2008

ಆತ್ಮೀಯರೇ,

ಬನ್ನಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

- ಚಾಮರಾಜ ಸವಡಿ