ಸ್ನೇಹಿತರೇ,
ಮೊದಲ ಹಂತದ ಚುನಾವಣೆ ಮುಗಿದಿದೆ. ಶಾಂತಿಯುತವಾಗಿ ಮುಗಿದಿದೆ ಎಂಬ ಸಮಾಧಾನ ಒಂದೆಡೆಯಾದರೆ, ಮತದಾನ ಪ್ರಮಾಣ ಕಡಿಮೆಯಾಗಿದ್ದರೂ, ತಕ್ಕ ಮಟ್ಟಿಗೆ ವಿವೇಚನೆಯುಳ್ಳ ಮತದಾರರು ಪಾಲ್ಗೊಂಡಿದ್ದರು ಎಂಬ ಸಮಾಧಾನ ಇನ್ನೊಂದೆಡೆ.
ಇದಕ್ಕೆ ಹಲವಾರು ಕಾರಣಗಳಿವೆ.
ಮೊದಲನೆಯದಾಗಿ ಚುನಾವಣಾ ಆಯೋಗ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳು. ಚುನಾವಣೆ ಪ್ರಕ್ರಿಯೆ ಘೋಷಣೆಯಾದ ಕೂಡಲೇ ರಾಜ್ಯದ ವಿವಿಧೆಡೆ ಕೈಗೊಂಡ ಭದ್ರತಾ ಕ್ರಮಗಳಿಂದಾಗಿ ಕೋಟ್ಯಂತರ ರೂಪಾಯ ಮೌಲ್ಯದ ಮದ್ಯ, ಮತದಾರರಿಗೆ ಹಂಚಲು ತಂದಿದ್ದ ಸೀರೆಗಳು, ಬಟ್ಟೆ-ಬರೆಗಳು, ಪಾತ್ರೆ ಪಡಗಗಳು, ಟಿವಿ, ಕೈಗಡಿಯಾರ ಇತ್ಯಾದಿ ವಸ್ತುಗಳ ಜೊತೆಗೆ ವಾಹನಗಳು ಹಾಗೂ ನಗದನ್ನು ಸಹ ವಶಪಡಿಸಿಕೊಳ್ಳಲಾಯಿತು. ಇದರಿಂದ ಬೆದರಿದ ರಾಜಕೀಯ ಪಕ್ಷಗಳು ಹಾಗೂ ಉಳ್ಳ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಲು ಹಿಂದೆಮುಂದೆ ನೋಡುವಂತಾಯಿತು.
ಎರಡನೆಯದಾಗಿ, ಪ್ರತಿ ಸಲ ಚುನಾವಣೆಯಲ್ಲಿ ದೊರೆಯುತ್ತಿದ್ದ ಉಚಿತ ಊಟ, ಬಟ್ಟೆ-ಬರೆ, ಮದ್ಯ ಹಾಗೂ ಹಣ ಈ ಸಲ ಸಿಗದಿದ್ದರಿಂದ ಬಡ ಹಾಗೂ ಅಶಿಕ್ಷಿತ ಮತದಾರರ ಪೈಕಿ ಬಹಳಷ್ಟು ಜನ ಮತದಾನ ಮಾಡಿಲ್ಲ. ಆದರೆ, ಮತದಾನದ ಮಹತ್ವ ಕುರಿತು ಸಾಕಷ್ಟು ಪ್ರಚಾರ ನಡೆದಿದ್ದರಿಂದ ವಿದ್ಯಾವಂತ ಹಾಗೂ ಇದೇ ಮೊದಲ ಬಾರಿ ಮತದಾನದ ಅರ್ಹತೆ ಪಡೆದಿದ್ದ ಯುವ ಜನಾಂಗ ದೊಡ್ಡಪ್ರಮಾಣದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು.
ಹೀಗಾಗಿ, ಒಟ್ಟಾರೆ ಮತದಾನ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸ ಇಲ್ಲದಿದ್ದರೂ, ಆಗಿರುವ ಮತದಾನದ ಪೈಕಿ ಪ್ರಜ್ಞಾವಂತರ, ವಿದ್ಯಾವಂತರ ಪಾಲು ದೊಡ್ಡದಿದೆ ಎಂಬುದು ಸಮಾಧಾನದ ಸಂಗತಿ. ಇದರ ನೇರ ಪರಿಣಾಮ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೇಲೆ ಆಗಲಿದೆ ಎನ್ನಬಹುದು.
ಏಕೆಂದರೆ, ಇದುವರೆಗಿನ ಅನುಭವದ ಪ್ರಕಾರ, ವಿದ್ಯಾವಂತರು ಬಿಜೆಪಿ ಬೆಂಬಲಿಸುವುದು ಹೆಚ್ಚು. ಅದು ಸತ್ಯ ಎನ್ನುವುದಾದರೆ, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಮುನ್ನಡೆ ಸಾಧಿಸಲಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬರಲಿದೆ ಎಂಬುದು ಒಂದು ಅಂದಾಜು.
ಇದು ದೂರದಲ್ಲಿರುವ ಎಲ್ಲ ಕನ್ನಡಿಗರ ಗಮನಕ್ಕೆ ಎಂದು ಬರೆದಿದ್ದೇನೆ. ಉಳಿದಿದ್ದನ್ನು ನೀವೇ ಬಲ್ಲಿರಿ. ಅಲ್ಲವೆ?
- ಚಾಮರಾಜ ಸವಡಿ
Recent Comments